ವಿನು ಬಳಂಜ ನಿರ್ದೇಶನದ ಜೋಗುಳ ಧಾರಾವಾಹಿ ಅಲ್ಪಾವಧಿಯಲ್ಲೇ ಎಲ್ಲರ ಮನೆ ಮಾತಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ ಉತ್ತಮ ದೃಶ್ಯ ಸಂಯೋಜನೆ ಇದೆ. ಧಾರವಾಹಿಯೊಂದಕ್ಕೆ ಕೇವಲ ಸಂಭಾಷಣೆ ಇದ್ದರೆ ಸಾಲದು. ದೃಶ್ಯಗಳು ಕೂಡಾ ಶ್ರೀಮಂತವಾಗಿರಬೇಕು ಎನ್ನುವುದು ವಿನು ಬಳಂಜ ಅವರ ಅಭಿಪ್ರಾಯ.
ಈ ಧಾರವಾಹಿಯಲ್ಲಿ ಹಳೆಬೀಡು, ಮೂಡಬಿದರೆ ಮುಂತಾದ ಲೋಕೇಶನ್ಗಳನ್ನು ಅವರು ಅದ್ಬುತವಾಗಿ ಬಳಸಿಕೊಂಡಿದ್ದಾರೆ. ನಿರ್ದೇಶಕನ ಜೀವನ ಎಂದರೆ ಅದು ಸಾರ್ವಜನಿಕ ರಸ್ತೆ ಇದ್ದಂತೆ ಎಂದು ಅವರು ಉಪಮೆ ಕೊಡುತ್ತಾರೆ. ಉಬ್ಬು ತಗ್ಗುಗಳು, ಮ್ಯಾನ್ಹೋಲ್ಗಳು, ಟ್ರಾಫಿಕ್ ಸಿಗ್ನಲ್ಗಳು, ಜಾಮ್ಗಳು ಇದೆಲ್ಲವನ್ನು ರೂಢಿಸಿಕೊಂಡು ತೆರೆ ಮೇಲೆ ತಂದರೆ ಆತ ನಿಜವಾದ ನಿರ್ದೇಶಕ ಎನ್ನುವುದು ವಿನು ಅಭಿಪ್ರಾಯ.
ವಿನು ಬಳಂಜ ಹಿಂದೆ ಚೀಟಿ ಕುಟುಂಬ ಹಾಗೂ ಪ್ರೀತಿ ಇಲ್ಲದ ಮೇಲೆ ಧಾರವಾಹಿಗಳನ್ನು ನಿರ್ದೇಶಿಸಿದ್ದರು. ಇದರಲ್ಲಿ ಪ್ರೀತಿ ಇಲ್ಲದ ಮೇಲೆ ಧಾರವಾಹಿ ಅವರಿಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿತು. ಸೀತಾರಾಮ್ ಗರಡಿಯಲ್ಲಿದ್ದ ವಿನು ಮುಕ್ತ ಧಾರವಾಹಿಗೆ ಸಂಚಿಕೆ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈಗ ಇವರ ಜೋಗುಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.