Select Your Language

Notifications

webdunia
webdunia
webdunia
webdunia

ಚಂದ್ರು 'ಮಳೆ'ಯಲ್ಲಿ ಒದ್ದೆಯಾಗಲಿರುವ ನಿರ್ದೇಶಕ ಪ್ರೇಮ್!

ಚಂದ್ರು 'ಮಳೆ'ಯಲ್ಲಿ ಒದ್ದೆಯಾಗಲಿರುವ ನಿರ್ದೇಶಕ ಪ್ರೇಮ್!
MOKSHA
ನಟ- ಗಾಯಕ- ಚಿತ್ರ ನಿರ್ದೇಶಕ ಪ್ರೇಮ್ ಹಾಗೂ ಮತ್ತೋರ್ವ ಚಿತ್ರ ನಿರ್ದೇಶಕ ಆರ್. ಚಂದ್ರು ಇವರಿಬ್ಬರನ್ನೂ ಅಕ್ಕಪಕ್ಕದಲ್ಲಿ ನಿಲ್ಲಿಸಿದರೆ ಸ್ವಲ್ಪ ಕನ್‌ಫ್ಯೂಸ್ ಆಗುತ್ತೆ ಕಣ್ರೀ ಅಂತ ಚಿತ್ರರಂಗದ ಕೆಲವರು ಹೇಳುವುದುಂಟು. ಇದಕ್ಕೆ ಕಾರಣ ಇಬ್ಬರೂ ನೋಡಲು ಕೊಂಚ ಒಂದೇ ಥರ ಇರೋದು, ಇಬ್ಬರೂ ಸಹ ಹಣೆಗೆ ವಿಭೂತಿ- ಕುಂಕುಮವನ್ನಿಡುವುದು, ಇಬ್ಬರೂ ಲೈಟಾಗಿ ಗಡ್ಡ ಬಿಟ್ಟಿರೋದು ಅಷ್ಟೇ ಅಲ್ಲ, ಇಬ್ಬರೂ ತಂತಮ್ಮ ಚಿತ್ರಗಳ ಕುರಿತು ಸ್ವಲ್ಪ ಹೆಚ್ಚೇ ಅನಿಸುವಂಥ ಹೈಪ್-ಪ್ರಚಾರ ಸೃಷ್ಟಿಸೋದು..!

ಇವರ ಸಾಮ್ಯತೆಗಳೇನಿದ್ರೂ ಇರಲಿ ಬಿಡಿ. ಆದರೆ ಈ ಇಬ್ಬರೂ ತಮ್ಮ ಚಿತ್ರಗಳ ನಿರ್ದೇಶನದಲ್ಲಿ ಒಂದು ಮಟ್ಟಿಗೆ ಭಾರೀ ಪ್ರಚಾರ ಪಡೆದದ್ದಂತೂ ಸುಳ್ಳಲ್ಲ. ಜತೆಗೆ ಇಬ್ಬರೂ ಹಿಟ್ ಚಿತ್ರಗಳನ್ನೇ ನೀಡಿದವರು. ಈಗ ವಿಷಯ ಏನಪ್ಪಾ ಅಂದ್ರೆ, ಚಂದ್ರುರವರ ಮುಂದಿನ ಚಿತ್ರದಲ್ಲಿ ಪ್ರೇಮ್ ನಟಿಸಲಿರುವುದು! ಎಸ್. ಆಶ್ಚರ್ಯವಾದರೂ ಇದು ನೂರಕ್ಕೆ ನೂರರಷ್ಟು ಸತ್ಯ.

ವಾಸ್ತವವಾಗಿ ಇದಕ್ಕೂ ಮುಂಚೆ, ಪ್ರೇಮ್‌ಕಹಾನಿ ಚಿತ್ರಕ್ಕೆ ಪ್ರೇಮ್ ಅವರೇ ನಾಯಕನಾಗಬೇಕಿತ್ತಂತೆ! (ಆ ಕಾರಣಕ್ಕೇ ಆ ಚಿತ್ರಕ್ಕೆ ಪ್ರೇಮ್‌ಕಹಾನಿ ಅಂತ ಹೆಸರಿಟ್ಟಿದ್ದರಾ ಅಂತ ತರಲೆ ಪ್ರಶ್ನೆ ಕೇಳ್ಬೇಡಿ ಮಾರಾಯ್ರೇ?!) ಆದರೆ ಪ್ರೇಮ್ ಅವರು ಪುನೀತ್ ಅವರ ರಾಜ್ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರಿಂದ ವಿಧಿಯಿಲ್ಲದೆ ಅಜಯ್ ಕುಮಾರ್ ಅವರನ್ನೇ ಹಾಕಿಕೊಳ್ಳಬೇಕಾಯಿತಂತೆ.

ಈಗ ಪ್ರಾರಂಭವಾಗಲಿರುವ ಚಿತ್ರಕ್ಕೆ ಮಳೆ ಎಂದು ಹೆಸರಿಡಲಾಗಿದೆ. ಮುಂಗಾರು ಮಳೆ ನಂತರ, ಮಳೆಯು ಬರಲಿ ಮಂಜೂ ಇರಲಿ ಎಂಬ ಚಿತ್ರ ಬಂತು. ಸದ್ಯದಲ್ಲಿಯೇ ಗೋಲ್ಡನ್‌ಸ್ಟಾರ್ ಗಣೇಶರ ಮಳೆಯಲಿ ಜೊತೆಯಲಿ ಚಿತ್ರ ಬರುತ್ತಿದೆ. ಈಗ ಮತ್ತೊಂದು ಮಳೆ. ಕಥೆ-ಚಿತ್ರಕಥೆ ಎಲ್ಲವೂ ಚರ್ಚೆಯಾಗಿದೆಯಂತೆ. ಇದು ಡಿಫರೆಂಟ್ ಚಿತ್ರವಂತೆ. ಚಂದ್ರುರವರ ಹಿಂದಿನ ಚಿತ್ರಗಳಲ್ಲಿದ್ದಂತೆ, ನಾಯಕ ಈ ಚಿತ್ರದಲ್ಲಿ ಸಾಯವುದಿಲ್ಲವಂತೆ. ಸದ್ಯಕ್ಕೆ ಇಷ್ಟು ಸಾಕು ಅಲ್ಲವೇ?

ಒಟ್ಟಾರೆ ಪ್ರೀತಿ ಏಕೆ ಭೂಮಿ ಮೇಲಿದೆ??? ಅನ್ನುತ್ತಾ ನಾಯಕನಾದ ನಿರ್ದೇಶಕ ಪ್ರೇಮ್‌ಗೆ ಮತ್ತೆ ನಾಯಕನಾಗುವ ಹಪಹಪಿತನ ನಿಂತಿಲ್ಲವೇನೋ...

Share this Story:

Follow Webdunia kannada