ಕನ್ನಡ ಕಲಿಸಿ, ಮಾತಾಡಿ, ಉಳಿಸೋಣ: ಶಿವಣ್ಣ, ಉಪ್ಪಿ
ನಮಗೆ ಕನ್ನಡದ ಬಗ್ಗೆ ಅಪಾರ ಗೌರವವಿದೆ, ನಾವು ಕನ್ನಡ ನಾಡಿನ ಹೆಮ್ಮೆಯ ಮಕ್ಕಳು. ಯಾವತ್ತೂ ಕನ್ನಡಕ್ಕಾಗಿ ಕೈಯೆತ್ತಲು ನಾವು ಸಿದ್ಧ. ಕನ್ನಡ ಇದ್ದರೆ ನಾವು ಕೂಡ ಇದ್ದೇವೆ. ಇನ್ನೊಬ್ಬರಿಗೆ ಕನ್ನಡವನ್ನು ಕಲಿಸುವ ಮೂಲಕ ಕನ್ನಡದ ಸೇವೆ ಮಾಡೋಣ - ಇದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ಗ್ಲಾಮರಸ್ ಕ್ವೀನ್ ರಾಗಿಣಿ ಕನ್ನಡದ ಬಗ್ಗೆ ಉದುರಿಸಿರುವ ಅಣಿಮುತ್ತುಗಳು. ಹೆಂಡತಿಗೆ ಕನ್ನಡ ಕಲಿಸಿದ್ದೇನೆ - ಉಪೇಂದ್ರ (ಮುಂದಿನ ಪುಟದಲ್ಲಿ)
ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡದ ಕುರಿತು ಮಾತನಾಡಿದ ಉಪೇಂದ್ರ, ನಮಗೂ ತಮಿಳರಿಗೂ ತುಂಬಾ ವ್ಯತ್ಯಾಸವಿದೆ ಎಂದರು. ತಮಿಳರು ಮತ್ತು ಕನ್ನಡಿಗರಿಗೆ ಪರಸ್ಪರ ಹೋಲಿಕೆ ಅಸಾಧ್ಯ. ಅವರು ತಮಿಳು ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ. ನಾವು ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುತ್ತೇವೆ. ನಾವು ತಮಿಳುನಾಡಿಗೆ ಹೋದಾಗ ನಮಗೆ ತಮಿಳಿನ ಅನಿವಾರ್ಯತೆ ಎದುರಾಗುತ್ತದೆ. ಅವರು ಇಲ್ಲಿಗೆ ಬರುವಾಗ ಕನ್ನಡದ ಅನಿವಾರ್ಯತೆ ಇಲ್ಲ ಎಂದು ಪ್ರಸಕ್ತ ಸ್ಥಿತಿಯನ್ನು ಉಪ್ಪಿ ತನ್ನದೇ ಶೈಲಿಯಲ್ಲಿ ವಿಶ್ಲೇಷಣೆ ನಡೆಸಿದರು.ನಾನು ನನ್ನ ಹೆಂಡತಿ ಪ್ರಿಯಾಂಕಾಗೆ ಕನ್ನಡ ಕಲಿಸಿದ್ದೇನೆ. ಮಕ್ಕಳಿಗೂ ಕನ್ನಡ ಕಲಿಸುತ್ತಿದ್ದೇವೆ. ನಾನು ಮತ್ತು ಪತ್ನಿ ಯಾವ ಕಾರ್ಯಕ್ರಮಕ್ಕೆ ಹೋದರೂ ಕನ್ನಡದಲ್ಲೇ ಮಾತನಾಡುತ್ತೇವೆ. ನಮ್ಮ ಮನೆ ಭಾಷೆಯೂ ಕನ್ನಡ. ಮಕ್ಕಳಿಗೆ ನಾವು ಮೊದಲು ಕನ್ನಡ ಕಲಿಸಬೇಕು. ಹಾಗಾದರೆ ಮಾತ್ರ ಕನ್ನಡವನ್ನು ಉಳಿಸಲು ಸಾಧ್ಯ ಎಂದಿರುವ ಉಪ್ಪಿ, ಪರಭಾಷಿಗರಲ್ಲೂ ಕನ್ನಡದಲ್ಲೇ ಮಾತನಾಡೋಣ. ಅವರಿಗೂ ಕನ್ನಡದ ಕಂಪನ್ನು ಪಸರಿಸೋಣ ಎಂದು ಕರೆ ನೀಡಿದ್ದಾರೆ. ನಾನು ಕನ್ನಡದ ಹೆಮ್ಮೆಯ ಪುತ್ರ - ಶಿವಣ್ಣ (ಮುಂದಿನ ಪುಟದಲ್ಲಿ)
ಕನ್ನಡ ನಮ್ಮ ಭಾಷೆ. ಈ ಭಾಷೆಗೆ ಅಪಾಯವಿದೆ ಎಂಬ ಸಂದರ್ಭದಲ್ಲಿ ನಾನು ಸದಾ ಅದರ ರಕ್ಷಣೆಗೆ ಸಿದ್ಧವಿದ್ದೇನೆ. ಕನ್ನಡ ಭಾಷೆಗೆ ಬೆಂಬಲವಾಗಿರುವ ಚಿತ್ರರಂಗ ಮತ್ತು ನನ್ನ ಬೆಂಬಲ ಯಾವತ್ತೂ ಇರುತ್ತದೆ. ನನಗೆ ನಾನು ಕನ್ನಡದ ಹೆಮ್ಮೆಯ ಪುತ್ರ ಅಂತ ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.ಕನ್ನಡೇತರರನ್ನು ನಮ್ಮ ಭಾಷೆ ಕಲಿಯುವಂತೆ ಮಾಡುವ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳಿರುವ ಅವರು, ಹಾಗೆ ಮಾಡಿದಲ್ಲಿ ಅದೇ ಸಮಾಜ ಸೇವೆ ಎನಿಸಿಕೊಳ್ಳುತ್ತದೆ. ಕನ್ನಡ ರಾಜ್ಯೋತ್ಸವದ ಕಂಪು ಒಂದೇ ದಿನಕ್ಕೆ ಮುಗಿಯಬಾರದು, ಅದು ವರ್ಷಪೂರ್ತಿ ಇರಬೇಕು ಎಂದರು.ಈ ನಡುವೆ ಕನ್ನಡ ಸಿನಿಮಾಗಳನ್ನು ಹೇಗೆ ನಿರ್ಮಿಸಿದರೂ ಎಲ್ಲಾ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂಬ ನೋವನ್ನು ಶಿವಣ್ಣ ಹೊರಗೆ ಹಾಕಿದ್ದಾರೆ. ಕನ್ನಡ ಸಿನಿಮಾಗಳ ನಿಜವಾದ ಬೆನ್ನೆಲುಬು ಉತ್ತರ ಕರ್ನಾಟಕದ ಪ್ರೇಕ್ಷಕರು ಅನ್ನೋದು ಅವರ ಅಭಿಪ್ರಾಯ. ನಾನೀಗ ಕನ್ನಡದ ಹುಡುಗಿ - ರಾಗಿಣಿ (ಮುಂದಿನ ಪುಟದಲ್ಲಿ)