Select Your Language

Notifications

webdunia
webdunia
webdunia
webdunia

ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಅಂತ್ಯಸಂಸ್ಕಾರಕ್ಕೆ ವಿರೋಧ?

ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಅಂತ್ಯಸಂಸ್ಕಾರಕ್ಕೆ ವಿರೋಧ?
, ಗುರುವಾರ, 31 ಡಿಸೆಂಬರ್ 2009 (13:35 IST)
ವರನಟ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರ ನಡೆದ ಕಂಠೀರವ ಸ್ಟುಡಿಯೋದಲ್ಲೇ ಮೇರುನಟ ವಿಷ್ಣುವರ್ಧನ್ ಅಂತ್ಯಸಂಸ್ಕಾರ ನಡೆಯಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದರು ಮತ್ತು ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು ಎಂಬ ಕುತೂಹಲಕಾರಿ ಅಂಶವೊಂದು ಬಹಿರಂಗವಾಗಿದೆ.

ಬನಶಂಕರಿ ಚಿತಾಗಾರದಲ್ಲಿ ವಿಷ್ಣು ಅಂತ್ಯಸಂಸ್ಕಾರ ನಡೆಸುವುದೆಂಬ ತೀರ್ಮಾನಕ್ಕೆ ಕುಟುಂಬದ ಸದಸ್ಯರು ಒಂದು ಹಂತದಲ್ಲಿ ಬಂದಿದ್ದರಾದರೂ, ಇದಕ್ಕೆ ಪ್ರತಿರೋಧ ಹೆಚ್ಚಿದ ಹಿನ್ನೆಲೆಯಲ್ಲಿ ನಿರ್ಧಾರ ಬದಲಾಯಿಸಲು ಆಪ್ತರು ಒಪ್ಪಿದ್ದರು.
PR


ಚಿತ್ರರಂಗದ ಎರಡು ಅಪರೂಪದ ಮುತ್ತುಗಳಾದ ರಾಜ್ ಮತ್ತು ವಿಷ್ಣುರವರ ಸ್ಮಾರಕಗಳು ಅಭಿಮಾನಿಗಳು ಮತ್ತು ಜನತೆಗೆ ಒಂದೇ ಕಡೆ ಲಭ್ಯವಾಗಬೇಕು ಎಂಬ ವಾದ ಒಂದೆಡೆಯಿಂದ ಬಂದಿತ್ತು. ಆದರೆ ಈ ವಿಚಾರದಲ್ಲಿ ಪರ-ವಿರೋಧಗಳು ಹೆಚ್ಚಾದ ಕಾರಣ ಈ ತೀರ್ಮಾನದಿಂದ ಹಿಂದಕ್ಕೆ ಸರಿಯಬೇಕಾಯಿತು.

ಅಲ್ಲದೆ ಇಬ್ಬರು ಮೇರುನಟರ ಸ್ಮಾರಕಗಳನ್ನು ಒಂದೇ ಕಡೆ ನಿರ್ಮಿಸಿದಲ್ಲಿ ಅಭಿಮಾನಿಗಳ ನಡುವೆ ಘರ್ಷಣೆಗಳು ಸಂಭವಿಸುವ ಸಾಧ್ಯತೆಗಳಿರುವುದರಿಂದ, ಪ್ರತ್ಯೇಕ ಸ್ಟುಡಿಯೋಗಳೇ ಉತ್ತಮ ಎಂಬ ಅಭಿಪ್ರಾಯಗಳಿಗೆ ಮನ್ನಣೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಅಂಬರೀಷ್, ಎಲ್ಲರಿಗೂ ಸಲ್ಲುವ ನಿರ್ಧಾರ ತೆಗೆದುಕೊಳ್ಳಲು ಮುಂದಡಿಯಿಟ್ಟರು. ವಿಷ್ಣು ಮತ್ತು ಭಾರತಿ ನಡುವೆ ಪ್ರೀತಿ ಮೊಳಕೆಯೊಡೆದಿದ್ದ ಬಾಲಣ್ಣ ಅವರ ಅಭಿಮಾನ್ ಸ್ಟುಡಿಯೋದಲ್ಲೇ ಅಂತ್ಯಸಂಸ್ಕಾರ ನಡೆಯಲಿ ಎಂಬ ಅಂತಿಮ ತೀರ್ಮಾನಕ್ಕೆ ನಂತರ ಬರಲಾಯಿತು.

ಬಳಿಕ ಅಂಬರೀಷ್ ಈ ವಿಚಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದರು. ಮುಖ್ಯಮಂತ್ರಿಯವರು ಸ್ಟುಡಿಯೋದ ಮಾಲಕ ಬಾಲಣ್ಣ ಅವರ ಪುತ್ರ ಗಣೇಶ್ ಅವರನ್ನು ಸಂಪರ್ಕಿಸಿ ಎರಡು ಎಕರೆ ಜಾಗ ನೀಡುವಂತೆ ವಿನಂತಿಸಿಕೊಂಡರು. ಆ ಮೂಲಕ ಸಂಭಾವ್ಯ ವಿವಾದವೊಂದನ್ನು ತಪ್ಪಿಸುವಲ್ಲಿ ಅಂಬಿ ಮಹತ್ವದ ಪಾತ್ರವಹಿಸಿದ್ದರು ಎಂದು ಹೇಳಲಾಗಿದೆ.

ಅಭಿಮಾನ್ ಸ್ಟುಡಿಯೋದಲ್ಲಿ ಪ್ರೀತಿ ಆರಂಭವಾದ ಬಳಿಕ ವಿಷ್ಣು-ಭಾರತಿ ಜೋಡಿ ಗಣಪತಿ ದೇವಸ್ಥಾನವೊಂದನ್ನೂ ಕಟ್ಟಿಸಿದ್ದನ್ನು ನೆನಪಿಸಿಕೊಳ್ಳಬಹುದು. ಅದರ ಪಕ್ಕದಲ್ಲೇ ವಿಷ್ಣುವರ್ಧನ್ ಅಂತ್ಯಸಂಸ್ಕಾರ ನಡೆಸಲಾಗಿದ್ದು, ಇಲ್ಲೇ ಸ್ಮಾರಕವನ್ನು ನಿರ್ಮಿಸಲಾಗುತ್ತದೆ ಎಂದು ಸರಕಾರವೂ ಭರವಸೆ ನೀಡಿದೆ.

Share this Story:

Follow Webdunia kannada