ಐಂದ್ರಿತಾ ನಿರುದ್ಯೋಗಿ, ತಮಿಳಲ್ಲೂ ಲಕ್ಕು ಸರಿಯಿಲ್ಲ!
ಯೋಗರಾಜ್ ಭಟ್ರ ಎರಡೆರಡು, ದುನಿಯಾ ಸೂರಿಯ ಒಂದು, ಸುದೀಪ್-ಎಸ್. ನಾರಾಯಣ್ ಕಾಂಬಿನೇಷನ್ನಿನ ಇನ್ನೊಂದು ಚಿತ್ರದಲ್ಲಿ ನಟಿಸಿದರೂ ಐಂದ್ರಿತಾ ರೇಗೆ ಅದೃಷ್ಟ ಖುಲಾಯಿಸಿಲ್ಲ. ಇದೇನು ಹೊಸ ಮಾತಲ್ಲ, ಆದರೆ ಯಾವತ್ತೂ ಐಂದ್ರಿತಾ ಒಪ್ಪಿಕೊಳ್ಳುತ್ತಿರಲಿಲ್ಲ. ಈಗ ಒಪ್ಪಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಯಾಕೆಂದರೆ, ಅತ್ತ ತಮಿಳಿನಲ್ಲೂ ಸದ್ಯಕ್ಕೆ ಐಂಡಿಗೆ ಬಾಗಿಲು ತೆರೆಯುವ ಯಾವುದೇ ಸಾಧ್ಯತೆಗಳು ಗೋಚರಿಸುತ್ತಿಲ್ಲ!ಹಾಗೆ ನೋಡಿದರೆ ಐಂದ್ರಿತಾರಷ್ಟು ಅದೃಷ್ಟವಂತ ನಟಿ ಬೇರೆ ಇನ್ನೊಬ್ಬರಿಲ್ಲ. ಅದೇನಾಯ್ತೋ ಗೊತ್ತಿಲ್ಲ, ಮೇಸ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಜತೆ ಗಲಾಟೆ ಮಾಡಿಕೊಂಡ ನಂತರ ಅವರು ಗೆದ್ದರೂ ಅವಕಾಶಗಳು ಓಡಿಸಿಕೊಂಡು ಬರುತ್ತಿಲ್ಲ. ಇದಕ್ಕೆ ಸಾಕ್ಷಿ, ಪಾರಿಜಾತ ಬಿಡುಗಡೆಯಾದ ನಂತರ 'ಮೊಗ್ಗಿನ ಮನಸು' ಶಶಾಂಕ್ ಹೊಸ ಚಿತ್ರವೊಂದರ ಆಫರ್ ಬಿಟ್ಟರೆ ಐಂದ್ರಿತಾ ಖಾಲಿ ಖಾಲಿಯಾಗಿರುವುದು!
ಇದು ಕನ್ನಡದ ಕಥೆಯಾಯ್ತು. ತಮಿಳಿನಲ್ಲಿ ಐಂದ್ರಿತಾ ಅದೃಷ್ಟ ಯಾಕೆ ಕೈ ಕೊಡ್ತು? ಇದಕ್ಕೆ ಉತ್ತರ ಅಪಘಾತ. ಕನ್ನಡಿಗ ವಿನಯ್ ರೈ ನಾಯಕನಾಗಬೇಕಿದ್ದ ಚಿತ್ರವೀಗ ಮುಂದಕ್ಕೆ ಹೋಗಿದೆ. ಕಾರಣ, ನಾಯಕನಿಗೆ ಅಪಘಾತವಾಗಿದೆ. ಹಾಗಾಗಿ ಚಿತ್ರದ ಆರಂಭವೇನಿದ್ದರೂ ಮೇ ತಿಂಗಳಲ್ಲಿ. ಅಷ್ಟರಲ್ಲಿ ಪ್ರೊಜೆಕ್ಟ್ ಏನು ಬೇಕಾದರೂ ಆಗಬಹುದು!ಅಂದ ಹಾಗೆ, ಈ ಚಿತ್ರದ ನಿರ್ದೇಶಕ ಛಾಯಾಗ್ರಾಹಕ ರಮೇಶ್. ಇದೇ ಮೊದಲ ಬಾರಿ ಅವರು ನಿರ್ದೇಶಕರಾಗುತ್ತಿದ್ದಾರೆ.