ದುಬೈ ಬಾಬು ಆಗಿರುವ ಉಪ್ಪಿ ಈಗ ಲಂಡನ್ ಗೌಡ ಆಗಲಿದ್ದಾರೆ. ಉಪೇಂದ್ರ ನಾಯಕ ನಟರಾಗಿ ಅಭಿನಯಿಸಲಿರುವ ಲಂಡನ್ ಗೌಡ ಹೆಸರಿನ ಚಿತ್ರವೊಂದು ಮಾರ್ಚ್ನಲ್ಲಿ ಸೆಟ್ಟೇರುತ್ತಿದೆ. ಕನ್ನಡದಲ್ಲಿ ಶಿವಧ್ವಜ್ ಅಭಿನಯದ ಶುಭಂ ಚಿತ್ರ ನಿರ್ಮಿಸಿದ ಎನ್.ಆರ್.ಶೆಟ್ಟಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಉಪೇಂದ್ರ ಅವರ ಚಿತ್ರಕತೆ ಹಾಗೂ ಸಂಭಾಷಣೆ ಬರೆಯಲಿದ್ದಾರೆ.
ಮಂಡ್ಯದ ಅವಿದ್ಯಾವಂತ ಮುಗ್ಧ ಯುವಕನೊಬ್ಬ ಲಂಡನ್ಗೆ ಹೋಗಿ ಅಲ್ಲಿ ಅನುಭವಿಸುವ ಪಡಿಪಾಟಲುಗಳೇ ಲಂಡನ್ ಗೌಡ ಚಿತ್ರದ ಕಥೆ. ಉಪೇಂದ್ರ ಜೊತೆಗೆ ನಿರ್ಮಾಪಕರು ಹಳೆಯ ಕಮಿಟ್ಮೆಂಟ್ ಮಾಡಿಕೊಂಡಿದ್ದರಂತೆ. ಆದ್ದರಿಂದ ಈಗ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ.
ಈ ನಡುವೆ ಎನ್ ಆರ್ ಶೆಟ್ಟರು ಬಾಲಿವುಡ್ನಲ್ಲೂ ಹೆಜ್ಜೆ ಇಡುವ ಸೂಚನೆ ನೀಡಿದ್ದಾರೆ. ಆಡ್ಲ್ಯಾಬ್ಸ್ ಹಾಗೂ ಯುಟಿವಿ ಸಹಯೋಗದೊಂದಿಗೆ ಅವರು ಹಿಂದಿಯಲ್ಲಿ ಎರಡು ಚಿತ್ರಗಳನ್ನು ನಿರ್ಮಿಸಲಿದ್ದಾರೆ. ಅವುಗಳಲ್ಲಿ ಮೊದಲನೆಯದು ಇತ್ತೀಚೆಗೆ ಡೆಹ್ರಾಡೂನಿನಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿದ್ದು. ಮದುವೆ ಆಗುತ್ತೇನೆಂಬ ನಾಟಕವಾಡಿ ಮಹಿಳೆಯೊಬ್ಬಳು 12 ಗಂಡಸರನ್ನು ವಂಚಿಸಿದ ಘಟನೆಯನ್ನು ಚಿತ್ರವನ್ನಾಗಿಸಿದ್ದಾರೆ.
ಶೆಟ್ಟರು ನಿರ್ಮಿಸಲಿರುವ ಎರಡು ಬಾಲಿವುಡ್ ಚಿತ್ರಗಳಿಗೂ ಸಂತೋಷ್ ರೈ ಪಾತಾಜೆ ಕ್ಯಾಮರಾ ಹಿಡಿಯಲಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.