ನನ್ನನ್ನು ಅಷ್ಟು ಸುಲಭವಾಗಿ ನೀವು ಮನೆಯಿಂದ ಹೊರ ದಬ್ಬುವುದು ಸಾಧ್ಯವಿಲ್ಲ -- ಹೀಗೆಂದು ಕನ್ನಡ ಚಿತ್ರರಂಗದ ಕಣ್ಮಣಿಯಾಗಿ ಬದಲಾಗಿರುವ ಪ್ರಿಯಾಮಣಿ ಉತ್ತರಿಸಿರುವುದು ಅಪ್ಪನ ಪ್ರಶ್ನೆಗೆ. ಅಪ್ಪ ಕೇಳಿದ ಪ್ರಶ್ನೆಯೇನು? ವಯಸ್ಸಾಯ್ತಲ್ಲಮ್ಮ, ಮದುವೆ ಆಗ್ತೀಯಾ?!
ಬಣ್ಣದ ಲೋಕದಲ್ಲಿ ಒಂದು ಸುತ್ತು ಮಿಂಚಿರುವುದರಿಂದ ಇನ್ನಾದರೂ ಮಗಳು ಸಾಂಸಾರಿಕ ಜೀವನಕ್ಕೆ ಸಿದ್ಧಳಾಗಿರಬಹುದು ಎಂದು ಊಹಿಸಿದ್ದೇ ತಪ್ಪಾಗಿತ್ತು. ಹಾಗೆ ಅವರು ಕೇಳಿದ್ದೇ ಈ ಪ್ರಶ್ನೆ. ಮದುವೆ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀಯಾ? ನಿನ್ನ ಯೋಜನೆಗಳೇನು? ಹುಡುಗ ಹುಡುಕುವ ಕೆಲಸ ಶುರು ಮಾಡಬಹುದೇ ಎಂದು ಪ್ರಿಯಾಮಣಿ ತಂದೆ ಕೇಳಿದ್ದರು.
ನನ್ನನ್ನು ಅಷ್ಟು ಬೇಗ ಈ ಮನೆಯಿಂದ ಹೊರ ದಬ್ಬಲು ನಿಮಗೆ ಸಾಧ್ಯವಿಲ್ಲ. ಸದ್ಯಕ್ಕೆ ನನಗೆ ಮದುವೆ ಮುಖ್ಯವಲ್ಲ. ಒಬ್ಬ ನಟಿಯಾಗಿ ಇನ್ನಷ್ಟು ಸಾಧನೆ ಮಾಡಬೇಕು. ಮದುವೆ ಏನಿದ್ದರೂ ನಂತರ ಅಂತ ಉತ್ತರ ನೀಡಿದ್ದಂತೆ.
ಪ್ರಿಯಾಮಣಿಗೀಗ ಮದುವೆಯ ಯೋಚನೆಯೇ ಇಲ್ಲ. ಸಹೋದರನ ಮದುವೆ ಸಂಭ್ರಮದಲ್ಲಿ ಓಡಾಡುತ್ತಿರುವ ಹುಡುಗಿಗೆ, ಇನ್ನೂ ಒಂದಷ್ಟು ವರ್ಷ ಚಿತ್ರರಂಗದಲ್ಲಿ ಇರುವ ಆಸೆಯಿದೆ. ಹಾಗೆಂದು ಲವ್ವು-ಗಿವ್ವು ಇದೆ ಅಂತ ಭಾವಿಸಬೇಕಿಲ್ಲ ಅಂತ ಸ್ವತಃ ಆಕೆಯೇ ಸ್ಪಷ್ಟನೆಯನ್ನೂ ನೀಡಿದ್ದಾರೆ.
ನನಗೆ ನನ್ನ ಮಿಸ್ಟರ್ ರೈಟ್ ಇನ್ನೂ ಸಿಕ್ಕಿಲ್ಲ. ಹಾಗೊಂದು ವೇಳೆ ಸಿಕ್ಕಿದರೆ ಡಂಗುರ ಸಾರುತ್ತೇನೆ. ನಿಮಗೆಲ್ಲ ನಾನೇ ಹೇಳಿ ಬಿಡುತ್ತೇನೆ. ಹಾಗೆ ಹೇಳಿದ ನಂತರ ನಾನು ಮದುವೆಗೆ ತಡ ಮಾಡುವುದಿಲ್ಲ. ಸದ್ಯಕ್ಕಂತೂ ಅಂತಹ ಯಾವುದೇ ಪ್ರಶ್ನೆ ನನ್ನ ಮುಂದಿಲ್ಲ ಎಂದು ಪತ್ರಕರ್ತರ ಬಾಯ್ಮುಚ್ಚಿಸಿದ್ದಾರೆ.
ಶ್ರೀನಗರ ಕಿಟ್ಟಿ ಜತೆಗಿನ ಖೋ ಖೋ, ಶಿವರಾಜ್ ಕುಮಾರ್ 'ಲಕ್ಷ್ಮಿ', ಕಿಚ್ಚ ಸುದೀಪ್ ನಾಯಕರಾಗಿರುವ ವಿಷ್ಣುವರ್ಧನ ಮತ್ತು ಪುನೀತ್ ರಾಜ್ಕುಮಾರ್ 'ಅಣ್ಣಾ ಬಾಂಡ್' ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಮಣಿಯೀಗ ತಮಿಳು-ತೆಲುಗರಿಗೆ ಬೇಡವಾಗಿರುವ ಹುಡುಗಿ. ಆದರೂ ತಾನು ಬೇಡಿಕೆ ಕಳೆದುಕೊಂಡಿರುವ ನಾಯಕಿ ಎನ್ನುವುದನ್ನು ಒಪ್ಪಿಕೊಳ್ಳಲು ಆಕೆ ಸಿದ್ಧರಿಲ್ಲ.