ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ ಎಂಟು ವರ್ಷಗಳನ್ನು ಪೂರೈಸಿದರೂ, ಕಲಿಯುಗದ ಕರ್ಣ ಅಂಬರೀಷ್ ಜತೆ ನಟಿಸುವ ಅವಕಾಶ ಲಕ್ಕಿ ಸ್ಟಾರ್ ರಮ್ಯಾಗೆ ಒದಗಿ ಬಂದಿರಲಿಲ್ಲ. ಅದೊಂದು ಆಸೆ ರಮ್ಯಾ ಪಾಲಿಗೆ ಹಾಗೆಯೇ ಉಳಿದುಕೊಂಡಿತ್ತು. ಆದರೆ ಈಗ ಅದು ಈಡೇರಿದೆ. ಅವರೀಗ ಸಖತ್ ಖುಷಿಯಾಗಿದ್ದಾರೆ.
ಬಹುಶಃ ರಮ್ಯಾ ಆತ್ಮೀಯವಾಗಿರುವ ಕನ್ನಡ ಚಿತ್ರರಂಗದ ಹಿರಿ ಜೀವಗಳಲ್ಲಿ ಅಂಬರೀಷ್ ಮೊದಲನೆ ಸಾಲಿನ ಮೊದಲ ವ್ಯಕ್ತಿ. ಅಂಬಿ ಮಾತಿಗೆ ಮಾತ್ರ ರಮ್ಯಾ ಮರುತ್ತರ ನೀಡುವುದಿಲ್ಲ. ಅವರು ಹಾಕಿದ ಗೆರೆಯನ್ನು ದಾಟುವುದೂ ಇಲ್ಲ. ಅಷ್ಟೊಂದು ಗೌರವ, ಪ್ರೀತಿ. ಇದು ಈ ಹಿಂದೆ ರಮ್ಯಾ ಮೇಲಿನ ನಿಷೇಧ ಸೇರಿದಂತೆ ಸಮಸ್ಯೆಗೆ ಸಿಕ್ಕಾಗಲೆಲ್ಲ ಸಾಬೀತಾಗಿದೆ. ಮನೆಮಗಳಂತೆ ಜಂಭದ ಕೋಳಿಯನ್ನು ಅಂಬಿ ಪೋಷಿಸುತ್ತಾ ಬಂದಿದ್ದಾರೆ.
ಹೀಗಿರುವಾಗ ರಮ್ಯಾಗೆ ಅಂಬಿ ಜತೆ ನಟಿಸುವ ಆಸೆ ಇರದೇ ಇರಲು ಸಾಧ್ಯವೇ? ಅದು ಸಹಜ. ಅಂತಹ ಆಸೆ ಈಡೇರಿರುವುದು 'ಕಠಾರಿ ವೀರ ಸುರ ಸುಂದರಾಂಗಿ' ಚಿತ್ರದಲ್ಲಿ. ಸುರೇಶ್ ಕೃಷ್ಣ ನಿರ್ದೇಶನದ ಈ ಸಿನಿಮಾದಲ್ಲಿ ಅಂಬಿಯದ್ದು ಯಮ ಧರ್ಮರಾಯನ ಪಾತ್ರ. ರಮ್ಯಾರದ್ದು ಅತಿಲೋಕ ಸುಂದರಿಯ ಪಾತ್ರ. ಈ ಬಗ್ಗೆ ಸ್ವತಃ ರಮ್ಯಾ ವಿವರಣೆ ನೀಡಿದ್ದಾರೆ.
ಇದೇ ಮೊದಲ ಬಾರಿ ಅಂಬಿ ಅಂಕಲ್ ಜತೆ ನಟಿಸಿದ್ದೇನೆ. ಅದೂ ಮೊದಲ ದೃಶ್ಯ. ಸಂಪೂರ್ಣ ನರ್ವಸ್ ಆಗಿದ್ದೆ. ಅವರದ್ದು ಕಂಚಿನ ಕಂಠ. ಸಂಭಾಷಣೆ ಹೇಳುವ ಶೈಲಿಯಂತೂ ಅದ್ಭುತ. ಉದ್ದುದ್ದ ಡೈಲಾಗ್ಗಳನ್ನು ಹೇಳುವಾಗ ಅವರ ಸ್ಮರಣ ಶಕ್ತಿ ನಿಜಕ್ಕೂ ಅಚ್ಚರಿ. ಅವರು ಯಮ ಧರ್ಮರಾಜ ಎಂದು ಅತೀವ ಸಂತಸದಿಂದಲೇ ಹೈದರಾಬಾದಿನಿಂದ ತನ್ನ ಅನುಭವ ಹಂಚಿಕೊಂಡಿದ್ದಾರೆ.
ಇಲ್ಲಿ ರಮ್ಯಾಗೆ ರಿಯಲ್ ಸ್ಟಾರ್ ಉಪೇಂದ್ರ ನಾಯಕ. ಮುನಿರತ್ನ ನಿರ್ಮಾಣದ ಈ ಚಿತ್ರ, ದಕ್ಷಿಣ ಭಾರತದ ಮೊದಲ 3ಡಿ ಸಿನಿಮಾ ಎಂದು ಹೇಳಲಾಗುತ್ತಿದೆ.
' ಕಠಾರಿ ವೀರ ಸುರ ಸುಂದರಾಂಗಿ' ಚಿತ್ರತಂಡ ವಾರದ ಹಿಂದೆಯೇ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಗೆ ಹೋಗಿತ್ತು. ಮೊದಲ ಹಂತದ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಅಂಬರೀಷ್ ಹೋಗಿರಲಿಲ್ಲ. ಅವರ ಆಗಮನಕ್ಕಾಗಿ ತಾನು ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ ಎಂದೂ ಸಾಮಾಜಿಕ ಸಂಪರ್ಕ ತಾಣದಲ್ಲಿ ರಮ್ಯಾ ಹೇಳಿಕೊಂಡಿದ್ದಾರೆ.
ಇಲ್ಲಿ ಹಾಕಲಾಗಿರುವ ಇಂದ್ರಲೋಕ, ಯಮಲೋಕ ಮತ್ತು ಭೂಲೋಕದ ವಿಶೇಷ ಸೆಟ್ಗಳಲ್ಲಿ ಹಾಡುಗಳು ಮತ್ತು ಚಿತ್ರದ ಇತರ ಪ್ರಮುಖ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹಾಡುಗಳಿಗೆ ಸಂಗೀತ ವಿ. ಹರಿಕೃಷ್ಣ ಅವರದ್ದು. ಈ ಸಿನಿಮಾ ಸ್ವತಃ ಉಪ್ಪಿಯೇ ಬರೆದಿರುವ ಕಥೆ ಆಗಿರುವುದು ವಿಶೇಷ.