ಶ್ರೀಮಂತ ವರ್ಗಕ್ಕೆ ಸಬ್ಸಿಡಿ ದರದ ಅಡುಗೆ ಅನಿಲದ ಪೂರೈಕೆ ನಿಲ್ಲಿಸುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿಲ್ಲ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಪ್ರಸಕ್ತ ಎಲ್ಪಿಜಿ ಗ್ರಾಹಕರಿಗೆ ಸಬ್ಸಿಡಿಯನ್ನು ಸರೆಂಡರ್ ಮಾಡಿ ಮಾರುಕಟ್ಟೆ ದರದಲ್ಲಿ ಅಡುಗೆ ಅನಿಲ ಖರೀದಿಸುವಂತೆ ತೈಲ ಮಾರುಕಟ್ಟೆ ಕಂಪನಿಗಳು ಆಯ್ಕೆಯನ್ನು ನೀಡಿದೆ.
ಪ್ರಸ್ತುತ ಶ್ರೀಮಂತ ವರ್ಗಕ್ಕೆ ಸಬ್ಸಿಡಿ ನಿಲ್ಲಿಸುವ ಯಾವುದೇ ಪರಿಶೀಲನೆ ಇಲ್ಲ ಎಂದು ಅವರು ಹೇಳಿದ್ದಾರೆ. 15 ಕೋಟಿ ಎಲ್ಪಿಜಿ ಗ್ರಾಹಕರ ಪೈಕಿ 12, 471 ಜನರು ಮಾತ್ರ ಸ್ವಯಂಪ್ರೇರಿತರಾಗಿ ಸಬ್ಸಿಡಿಗಳನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಪ್ರಧಾನ್ ಲೋಕಸಭೆಗೆ ತಿಳಿಸಿದರು.
ಸಚಿವಾಲಯವು ಸಚಿವರಿಗೆ, ಸಂಸದರಿಗೆ, ಶಾಸಕರಿಗೆ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಸಬ್ಸಿಡಿಗಳನ್ನು ತ್ಯಜಿಸುವಂತೆ ಒತ್ತಾಯಿಸಿದೆ. ಗ್ರಾಹಕರು ಪ್ರಸಕ್ತ ವರ್ಷಕ್ಕೆ ಸಬ್ಸಿಡಿ ದರದಲ್ಲಿ 12 ಸಿಲಿಂಡರ್ಗಳನ್ನು ಪಡೆಯುವ ಅರ್ಹತೆ ಹೊಂದಿದ್ದಾರೆ. ಅದಕ್ಕಿಂತ ಹೆಚ್ಚು ಮಾರುಕಟ್ಟೆ ದರದಲ್ಲಿ ಖರೀದಿಸಬೇಕಾಗುತ್ತದೆ. ಸಬ್ಸಿಡಿ ದರದ 14.2 ಕೆಜಿ ಸಿಲಿಂಡರ್ ದೆಹಲಿಯಲ್ಲಿ 417 ರೂ.ಗೆ ಲಭ್ಯವಾಗುತ್ತದೆ. ಸಬ್ಸಿಡಿ ಕೋಟಾಕ್ಕಿಂತ ಹೆಚ್ಚಿನ ಸಿಲಿಂಡರ್ಗಳನ್ನು ಮಾರುಕಟ್ಟೆ ದರದಲ್ಲಿ 752 ರೂ. ಕೊಟ್ಟು ಖರೀದಿಸಬೇಕಾಗುತ್ತದೆ.