ಮಾರುಕಟ್ಟೆ ದರದಲ್ಲಿ ಎಲ್ಪಿಜಿ ಖರೀದಿಸಲು ಸಾಧ್ಯವಾಗುವ ಜನರು ಸಬ್ಸಿಡಿಯನ್ನು ಪಡೆಯಬಾರದು ಎಂದು ಪ್ರಧಾನಿ ಮೋದಿ ಅವರ ಮನವಿ ನಂತರ ಸುಮಾರು ಒಂದು ಕೋಟಿ ಗ್ರಾಹಕರು ಅಡುಗೆ ಅನಿಲದ ಮೇಲಿನ ಸಬ್ಸಿಡಿ ಪಡೆಯುವುದನ್ನು ಕೈಬಿಡುತ್ತಾರೆಂದು ಸರ್ಕಾರ ನಿರೀಕ್ಷಿಸಿದೆ.
ದೇಶದಲ್ಲಿ ಸುಮಾರು 15.3 ಕೋಟಿ ಎಲ್ಪಿಜಿ ಗ್ರಾಹಕರಿದ್ದಾರೆ. ಜಾಗತಿಕ ಇಂಧನ ಸಮಾವೇಶವನ್ನು ಉದ್ದೇಶಿಸಿ ಕಳೆದ ವಾರ ಮಾತನಾಡಿದ ಮೋದಿ ಎಲ್ಪಿಜಿ ಸಬ್ಸಿಡಿಯನ್ನು ಸುಮಾರು 2.8 ಲಕ್ಷ ಜನರು ಕೈಬಿಟ್ಟಿದ್ದು, ಇದರಿಂದ 100 ಕೋಟಿ ರೂ. ಉಳಿತಾಯವಾಗುತ್ತದೆ ಎಂದು ಹೇಳಿದ್ದರು.
ಈ 100 ಕೋಟಿಯನ್ನು ಬಡವರ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಮೋದಿ ಹೇಳಿದ್ದರು. ಸರ್ಕಾರ ನೇರ ಸೌಲಭ್ಯ ವರ್ಗಾವಣೆ ಯೋಜನೆ ಆರಂಭಿಸಿದಾಗಿನಿಂದ ಅನೇಕ ವ್ಯಕ್ತಿಗಳು ಸಬ್ಸಿಡಿ ಯೋಜನೆಯಿಂದ ಹೊರಗುಳಿದಿದ್ದಾರೆ. ಈ ಯೋಜನೆಯ ಪ್ರಕಾರ, ಸಬ್ಸಿಡಿ ಮೊತ್ತವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.