ಕಾರ್ಮಿಕರ ಭವಿಷ್ಯ ನಿಧಿ ಠೇವಣಿಗಳಿಗೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ನಿಗದಿಗೊಳಿಸಿದ್ದ 8.8 ಪ್ರತಿಶತ ಬಡ್ಡಿ ದರದ ಬದಲು 8.7 ಪ್ರತಿಶತ ದರದಲ್ಲಿ ಬಡ್ಡಿ ನೀಡಲು ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದೆ.
ನೌಕರರ ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿ ದರ ಕಡಿಮೆ ಮಾಡಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದು ಆರ್ಎಸ್ಎಸ್ ಬೆಂಬಲಿತ ಭಾರತೀಯ ಮಜ್ದೂರ್ ಸಂಘವು ಏಪ್ರಿಲ್ 27ರಂದು ದೇಶದಾದ್ಯಂತ ಭವಿಷ್ಯ ನಿಧಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.
ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ನಿರ್ಧಾರವನ್ನು ಸರಕಾರ ಪ್ರಥಮ ಭಾರಿ ತಳ್ಳಿಹಾಕಿದೆ. ನೌಕರರ ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿ ದರ 2013-14 ಮತ್ತು 2014-15 ರ ಆರ್ಥಿಕ ವರ್ಷದಲ್ಲಿ 8.75 ಪ್ರತಿಶತ ಬಡ್ಡಿದರ, 2012-13 ರ ಆರ್ಥಿಕ ವರ್ಷದಲ್ಲಿ 8.5 ಪ್ರತಿಶತ ಬಡ್ಡಿದರ ಮತ್ತು 2011-12 ಆರ್ಥಿಕ ವರ್ಷದಲ್ಲಿ 8.25 ಪ್ರತಿಶತ ಬಡ್ಡಿದರವನ್ನು ನಿಗದಿ ಪಡಿಸಿದ್ದು, ಕಾರ್ಮಿಕ ಸಂಘಟನೆಗಳು ಪ್ರಸಕ್ತ ವರ್ಷದಲ್ಲಿ 9 ಪ್ರತಿಶತ ಬಡ್ಡಿದರವನ್ನು ನಿಗದಿ ಮಾಡುವಂತೆ ಆಗ್ರಹಿಸಿದ್ದವು.
ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಪ್ರಸಕ್ತ ವರ್ಷದ ಫೆಬ್ರುವರಿಯಲ್ಲಿ ನಡೆದ ಸಭೆಯಲ್ಲಿ ನೌಕರರ ಭವಿಷ್ಯ ನಿಧಿ ಠೇವಣಿಯ ಮೇಲೆ 8.8 ಪ್ರತಿಶತ ಬಡ್ಡಿದರ ನಿಗದಿ ಮಾಡುವಂತೆ ಪ್ರಸ್ತಾವನೆ ನೀಡಿತ್ತು ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.