ಹಣದುಬ್ಬರದ ಕುಸಿತದಿಂದ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಕಡಿತ ಮಾಡಲು ಸೂಕ್ತ ಕಾಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ವರದಿಗಾರರಿಗೆ ಶುಕ್ರವಾರ ತಿಳಿಸಿದರು. ಜೂನ್ 2 ರಂದು ಆರ್ಬಿಐ ತನ್ನ ಹಣಕಾಸು ನೀತಿಯನ್ನು ಪರಾಮರ್ಶಿಸುತ್ತದೆ ಮತ್ತು ತನ್ನ ಪ್ರಮುಖ ಪಾಲಿಸಿ ದರವನ್ನು ಶೇ. 25 ಮೂಲಾಂಕಗಳಿಗೆ ಕಡಿತ ಮಾಡುತ್ತದೆಂದು ಅರ್ಥಶಾಸ್ತ್ರಜ್ಞರು ನಂಬಿದ್ದಾರೆ.
ಚಿಲ್ಲರೆ ಮತ್ತು ಸಗಟು ದರಗಳಲ್ಲಿ ತೀವ್ರ ಕಡಿತದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಉಂಟಾಗಬಹುದೆಂದು ಅವರು ನಂಬಿದ್ದಾರೆ. ಬಿಜೆಪಿ ಸರ್ಕಾರ ಕಳೆದ ವರ್ಷ ಆಯ್ಕೆಯಾಗಿದ್ದ ಸಂದರ್ಭದಲ್ಲಿ ತಮ್ಮ ಸರ್ಕಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಆರ್ಥಿಕತೆಗೆ ಪುನಶ್ಚೇತನ ನೀಡುವುದಾಗಿ ಹೇಳಿತ್ತು.
ಆದರೆ ಜೇಟ್ಲಿ ಅವರು ಮಂಡಿಸಿದ ಮೊದಲ ಬಜೆಟ್ನಿಂದ ಆರ್ಥಿಕ ತಜ್ಞರು ತೀರಾ ನಿರಾಶರಾಗಿದ್ದರು. ಈಗ ಜೇಟ್ಲಿ ಸೂಚನೆಯಂತೆ ರಿಸರ್ವ್ ಬ್ಯಾಂಕ್ ಬಡ್ಡಿ ದರ ಕಡಿತ ಮಾಡಿದರೆ ಗ್ರಾಹಕರ ಮನೆ ಸಾಲ, ವಾಹನ ಸಾಲದ ಮೇಲಿನ ಬಡ್ಡಿ ದರ ಮತ್ತಷ್ಟು ಕಡಿತವಾಗಬಹುದೆಂದು ನಿರೀಕ್ಷಿಸಲಾಗಿದೆ.