ಹಿಂಡಾಲ್ಕೋಗೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಕೇಸ್ ಡೈರಿ ಮತ್ತು ಅಪರಾಧದ ದಾಖಲೆಗಳನ್ನು ಮೊಹರಾದ ಲಕೋಟೆಯಲ್ಲಿ ವಿಶೇಷ ಕೋರ್ಟ್ಗೆ ಸಲ್ಲಿಸಿದೆ. ಕೋರ್ಟ್ ಈಗ ಸಿಬಿಐನ ತನಿಖೆ ಮುಗಿದ ವರದಿಯನ್ನು ಡಿ. 12ರಂದು ಪರಿಗಣನೆಗೆ ಎತ್ತಿಕೊಳ್ಳಲಿದೆ.
ಈ ಪ್ರಕರಣದ ಕೇಸ್ ಡೈರಿಯನ್ನು ಸಲ್ಲಿಸುವಂತೆ ಕೋರ್ಟ್ ಸೂಚಿಸಿದ ಎರಡು ದಿನಗಳಲ್ಲಿ ಸಿಬಿಐ ಮೊಹರಾದ ಲಕೋಟೆಯಲ್ಲಿ ದಾಖಲೆಗಳ ಎರಡು ಕಟ್ಟುಗಳನ್ನು ಸಲ್ಲಿಸಿದೆ. ಕೋರ್ಟ್ ಆದೇಶ ಪಾಲನೆಗಾಗಿ, ನಾವು ಕ್ರೈಮ್ ಫೋಲ್ಡರ್ ಮತ್ತು ಕೇಸ್ ಡೈರಿ ಎರಡನ್ನೂ ಸಲ್ಲಿಸುತ್ತಿದ್ದೇವೆ ಎದು ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ವಿ.ಕೆ. ಶರ್ಮಾ ವಿಶೇಷ ಸಿಬಿಐ ನ್ಯಾಯಾಧೀಶ ಭರತ್ ಪರಶರ್ ಅವರಿಗೆ ತಿಳಿಸಿದರು.
ಒಡಿಶಾದ ಹಿಂಡಾಲ್ಕೋಗೆ ತಲಾಬ್ರಿಯಾ 2 ಮತ್ತು 3 ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದಂತೆ ಕೈಗಾರಿಕೋದ್ಯಮಿ ಕುಮಾರ್ ಮಂಗಳಂ ಬಿರ್ಲಾ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ. ಪಾರಕ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಾತಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿತ್ತು.