90 ದಿನಗಳ ಕಪ್ಪು ಹಣ ಅನುಸರಣೆ ಗವಾಕ್ಷಿ ಯೋಜನೆಯಲ್ಲಿ ಘೋಷಣೆಯಾದ ಹಣವು 4147 ಕೋಟಿ ರೂ. ಮೊತ್ತವಾಗಿದ್ದು, ಮುಂಚಿನ 3770 ಕೋಟಿ ರೂ. ಮೊತ್ತಕ್ಕಿಂತ ಹೆಚ್ಚಾಗಿದೆ ಎಂದು ಕಂದಾಯ ಕಾರ್ಯದರ್ಶಿ ಹಸಮುಖ್ ಆದಿಯಾ ಸೋಮವಾರ ತಿಳಿಸಿದ್ದಾರೆ. 90 ದಿನಗಳ ಅನುಸರಣೆ ಗವಾಕ್ಷಿ ಮೂಲಕ ಕಪ್ಪು ಹಣ ಬಹಿರಂಗ ಮಾಡದವರ ವಿರುದ್ಧ ಸರ್ಕಾರದ ಕಾರ್ಯಯೋಜನೆ ಕುರಿತು ಪ್ರಶ್ನೆಗಳಿಗೆ ಉತ್ತರಿಸುತ್ತಾ, ಅವರು ಅಪಾಯಕ್ಕೆ ಮೈವೊಡ್ಡಿದ್ದಾರೆ. ನಾವು ಅವರ ಬೆನ್ನಟ್ಟುತ್ತೇವೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಆಧಿಯಾ ಹೇಳಿದರು.
ಕಳೆದ ವಾರ ಹೇಳಿಕೆ ನೀಡಿದಂತೆ ಕಪ್ಪು ಹಣ ಬಹಿರಂಗ ಮಾಡಿದವರ ಸಂಖ್ಯೆ 638ರಷ್ಟಿದ್ದು, ಬಹಿರಂಗ ಮಾಡಿದ ಒಟ್ಟು ಅಕ್ರಮ ವಿದೇಶಿ ಆಸ್ತಿ 4147 ಕೋಟಿ ರೂ. ಎಂದು ಆದಿಯಾ ಹೇಳಿದ್ದಾರೆ.
ಕಪ್ಪು ಹಣದ ಬಹಿರಂಗದಿಂದ ಸರ್ಕಾರಕ್ಕೆ ಒಟ್ಟು ತೆರಿಗೆ ಪಾವತಿ 2488. 20 ಕೋಟಿ ಎಂದು ಘೋಷಿಸಲಾಗಿದೆ. ಕಳೆದ ಅಕ್ಟೋಬರ್ ಒಂದರಂದು ಏಕ ಗವಾಕ್ಷಿ ಮೂಲಕ 3770 ಕೋಟಿ ಕಪ್ಪು ಹಣ ಘೋಷಿಸಲಾಗಿದೆ ಎಂದು ಸರ್ಕಾರ ತಿಳಿಸಿತ್ತು.
ಭಾರತೀಯರು ಅಡಗಿಸಿಟ್ಟಿರುವ ವಿದೇಶಿ ಕಪ್ಪು ಹಣ ಬಹಿರಂಗಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾತನಾಡುತ್ತಾ, ಯಾವುದೇ ಮೂಲಗಳಿಂದ ಯಾವುದೇ ಮಾಹಿತಿ ಬಂದಿದ್ದರೂ ಅದನ್ನು ಪರಿಶೀಲಿಸುತ್ತಿದ್ದು, ಅವರ ವಿರುದ್ಧ ದಂಡ ವಿಧಿಸುತ್ತೇವೆ ಮತ್ತು ಕಾನೂನು ಕ್ರಮ ಜರುಗಿಸುತ್ತೇವೆ ಎಂದು ನುಡಿದರು. ಎಚ್ಎಸ್ಬಿಸಿ ಬ್ಯಾಂಕ್ ಸಂಬಂಧಿಸಿದ ಮಾಹಿತಿ ಕುರಿತು ಉಲ್ಲೇಖಿಸಿ, 43 ಪ್ರಕರಣಗಳಲ್ಲಿ 132 ಪ್ರಾಸಿಕ್ಯೂಷನ್ ಫೈಲ್ ಮಾಡಲಾಗಿದೆ ಎಂದು ಹೇಳಿದರು.