ಹಿರಿಯ ಐಎಎಸ್ ಅಧಿಕಾರಿ ಎಸ್. ಭಟ್ಟಾಚಾರ್ಯ ಅವರನ್ನು ಕೋಲ್ ಇಂಡಿಯಾ ಲಿ. ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಕಳೆದ 6 ತಿಂಗಳಿಂದ ಕೋಲ್ ಇಂಡಿಯಾಗೆ ಪೂರ್ಣ ಸ್ವರೂಪದ ಮುಖ್ಯಸ್ಥರಿರಲಿಲ್ಲ. ಕ್ಯಾಬಿನೆಟ್ ನೇಮಕ ಸಮಿತಿ ಕೆಲವು ದಿನಗಳ ಹಿಂದೆ ಭಟ್ಟಾಚಾರ್ಯ ಅವರನ್ನು ಉನ್ನತ ಹುದ್ದೆಗೆ ನೇಮಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೆಚ್ಚುವರಿ ಕಾರ್ಯದರ್ಶಿ(ಕಲ್ಲಿದ್ದಲು) ಎ.ಕೆ. ದುಬೆ ಅವರಿಂದ ಭಟ್ಟಾಚಾರ್ಯ ಅಧಿಕಾರ ವಹಿಸಿಕೊಂಡಿದ್ದು, ಅವರಿಗೆ ಕೋಲ್ ಇಂಡಿಯಾದ ಸಿಎಂಡಿಯಾಗಿ ಹೆಚ್ಚುವರಿ ಕಾರ್ಯಭಾರ ವಹಿಸಲಾಗಿದೆ. ಭಟ್ಟಾಚಾರ್ಯ ಪ್ರಸಕ್ತ ಸಿಂಗಾರೇಣಿ ಕೊಲೈರೀಸ್ ಕಂಪನಿಯ ಸಿಎಂಡಿಯಾಗಿದ್ದಾರೆ.
ಹೊಸ ಮುಖ್ಯಸ್ಥರ ನೇಮಕವು 2019ರೊಳಗೆ ಒಂದು ಶತಕೋಟಿ ಟನ್ ಕಲ್ಲಿದ್ದಲು ಉತ್ಪಾದನೆ ಸಾಧನೆಗೆ ಕಾರ್ಯತಂತ್ರ ರೂಪಿಸಲು ನೆರವಾಗುತ್ತದೆ. ಕೋಲ್ ಇಂಡಿಯಾ ಕಳೆದ ವಿತ್ತೀಯ ವರ್ಷದಲ್ಲಿ 482 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆ ಗುರಿಯಿಂದ ವಂಚಿತವಾಗಿದ್ದು 462 ದಶಲಕ್ಷ ಟನ್ ಕಲ್ಲಿದ್ದಲನ್ನು ಮಾತ್ರ ಉತ್ಪಾದನೆ ಮಾಡಿದೆ.