ಐಡಿಬಿಐ ಬ್ಯಾಂಕ್ ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯದ ದೊರೆ ವಿಜಯ್ ಮಲ್ಯ 6,000 ಕೋಟಿ ರೂಪಾಯಿ ಹಣವನ್ನು ಮರುಪಾವತಿ ಮಾಡುವಂತೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಬ್ಯಾಂಕ್ ಒಕ್ಕೂಟ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಮಲ್ಯ ಪರ ವಕೀಲರು, ಬ್ಯಾಂಕುಗಳ ಗುರಿ ಹಣ ಹಿಂಪಡೆಯುವುದಲ್ಲ ಬದಲಾಗಿ ಉದ್ಯಮಪತಿಯನ್ನು ಜೈಲಿಗೆ ದೂಡುವ ಉದ್ದೇಶವನ್ನು ಹೊಂದಿವೆ ಎಂದು ವಾದಿಸಿದ್ದಾರೆ.
ಮಲ್ಯ ನೀಡಿರುವ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ವಿದೇಶಿ ಸ್ವತ್ತುಗಳು ಸೇರಿದಂತೆ ಮಲ್ಯ ಮತ್ತು ಅವರ ಕುಟುಂಬ ಸದಸ್ಯರ ಒಡೆತನದಲ್ಲಿರುವ ಒಟ್ಟು ಸ್ವತ್ತುಗಳ ಮೌಲ್ಯವನ್ನು ಬಹಿರಂಗ ಪಡಿಸುವಂತೆ ಸೂಚನೆ ನೀಡಿದೆ.
ವಿಜಯ್ ಮಲ್ಯ ತಮ್ಮ ಪತ್ನಿ ಮತ್ತು ಪುತ್ರರ ಹೆಸರಲ್ಲಿರುವ ಆಸ್ತಿಯ ವಿವರಗಳನ್ನು ಕೋರ್ಟ್ಗೆ ಸಲ್ಲಿಸಲು ಯಾವುದೇ ಅಡೆತಡೆಯಿಲ್ಲವೆಂದು ನಾವು ಭಾವಿಸುತ್ತೇವೆ ಎಂದು ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು ಆರ್.ಎಫ್.ನಾರಿಮನ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಹಿರಿಯ ವಕೀಲರಾದ ಸಿ.ಎಸ್. ವೈದ್ಯನಾಥನ್ ಮತ್ತು ಪರಾಗ್ ತ್ರಿಪಾಠಿ, ಮಲ್ಯ ಪರ ವಾದ ಮಂಡಿಸಿ, ಮಲ್ಯ ಸಾಲ ಬಾಕಿದಾರರಾಗಿದ್ದಾರೆ. ಆದರೆ ಉದ್ದೇಶಪೂರ್ವಕ ಸಾಲ ಬಾಕಿದಾರರಲ್ಲ. ಇದೊಂದು ಉದ್ಯಮದಲ್ಲಿ ನಷ್ಟ ಹೊಂದಿರುವ ಪ್ರಕರಣ ಮಾತ್ರ ಎಂದು ವಾದಿಸಿದರು.