ಬಿಸಿಸಿಐ ಆಫ್ ಸ್ಪಿನ್ ಮಾಡದಂತೆ ವೆಸ್ಟ್ ಇಂಡೀಸ್ ಸ್ಪಿನ್ನರ್ ಸುನಿಲ್ ನಾರಾಯಣ್ ಅವರಿಗೆ ನಿಷೇಧ ವಿಧಿಸಿರುವುದರಿಂದ ಸುನಿಲ್ ಅಕ್ಷರಶಃ ಯಾರಿಗೂ ಬೇಡವಾದ ಬೌಲರ್ ಎನಿಸಿದ್ದಾರೆ. ಐಪಿಎಲ್ ಸೇರಿದಂತೆ ಭಾರತ ಕ್ರಿಕೆಟ್ ಮಂಡಳಿ ಆಯೋಜಿಸಿದ ಯಾವುದೇ ಪಂದ್ಯದಲ್ಲಿ ಸುನಿಲ್ ಆಫ್ಸ್ಪಿನ್ ಬೌಲಿಂಗ್ ಮಾಡುವುದರಿಂದ ನಿಷೇಧಿಸಲಾಗಿದೆ. ಸುನಿಲ್ ಪುನಃ ಆಫ್ ಸ್ಪಿನ್ ಬೌಲಿಂಗ್ ಮಾಡಿದರೆ ಅದನ್ನು ನೋಬಾಲ್ ಎಂದು ತೀರ್ಪು ನೀಡಲಾಗುತ್ತದೆ ಮತ್ತು ತಾನೇತಾನಾಗಿ ಅವರು ಬಿಸಿಸಿಐ ಪ್ರಾಯೋಜಿತ ಬೌಲಿಂಗ್ನಿಂದ ನಿಷೇಧಿತರಾಗುತ್ತಾರೆ.
ಸುನಿಲ್ ನಾರಾಯಣ್ ಅವರಿಗೆ ನಕಲ್ ಬಾಲ್ ಮತ್ತು ವೇಗದ ನೇರ ಬಾಲ್ ಮುಂತಾದ ಎಸೆತಗಳನ್ನು ಬೌಲ್ ಮಾಡುವ ಅವಕಾಶವಿದ್ದರೂ ಬಿಸಿಸಿಐ ತೀರ್ಪಿನಿಂದ ಸುನಿಲ್ ವೃತ್ತಿಜೀವನ ಅಕ್ಷರಶಃ ಮುಗಿದುಹೋಗಿದೆ ಎಂದು ವೆಸ್ಟ್ ಇಂಡೀಸ್ ಮಾಜಿ ವೇಗಿ ಆಂಡಿ ರಾಬರ್ಟ್ಸ್ ಅಭಿಪ್ರಾಯಪಟ್ಟರು.
ನಾರಾಯಣ್ ಆಫ್ ಸ್ಪಿನ್ನರ್ ಆಗಿದ್ದು, ಅವರು ಆಫ್ ಸ್ಪಿನ್ ಬೌಲಿಂಗ್ ಮಾಡಲಾಗದಿದ್ದರೆ ಬೌಲಿಂಗ್ ಮಾಡುವಂತೆಯೇ ಇಲ್ಲ ಎಂದು ರಾಬರ್ಟ್ಸ್ ಹೇಳಿದರು. ನಾರಾಯಣ್ 2012ರಲ್ಲಿ ಐಪಿಎಲ್ ಪಂದ್ಯಾವಳಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. ಆದರೆ ಅವರು ಬೌಲಿಂಗ್ ಸುಧಾರಣೆ ಮಾಡಿಕೊಂಡು ಮೈದಾನಕ್ಕಿಳಿದ ಮೇಲೆ ಬೌಲಿಂಗ್ ಪರಿಣಾಮಕಾರಿಯಾಗದೇ ಐದು ಐಪಿಎಲ್ ಪಂದ್ಯಗಳಲ್ಲಿ ನಾರಾಯಣ್ ಎರಡು ವಿಕೆಟ್ ಮಾತ್ರ ಗಳಿಸಿದ್ದಾರೆ.
ನಾರಾಯಣ್ ಅವರನ್ನು ಮಾತ್ರ ಶಂಕಿತ ಬೌಲಿಂಗ್ ಶೈಲಿಗೆ ಆಯ್ದುಕೊಂಡಿದ್ದಾರೆ ಎಂದು ರಾಬರ್ಟ್ಸ್ ಭಾವಿಸಿದ್ದಾರೆ. ಭಾರತದಲ್ಲಿ ಕೂಡ ಅನೇಕ ಆಫ್ಸ್ಪಿನ್ನರ್ಗಳಿದ್ದು ಅದೇ ಸಮಸ್ಯೆಯಿಂದ ಕೂಡಿದ್ದಾರೆ. ಅವರು ಅನುಮಾನಾಸ್ಪದ ಬೌಲಿಂಗ್ ಶೈಲಿ ಮಾಡುವ ಎಲ್ಲಾ ಬೌಲರುಗಳತ್ತ ಗಮನಹರಿಸಬೇಕು. ನಾರಾಯಣ್ ಅವರಲ್ಲಿ ಮಾತ್ರ ಶಂಕಿತ ಬೌಲಿಂಗ್ ಶೈಲಿ ಗುರುತಿಸಿದ್ದೇಕೆ ಎಂದು ರಾಬರ್ಟ್ಸ್ ಪ್ರಶ್ನಿಸಿದರು.