ಹಾಲಿ ಚಾಂಪಿಯನ್ನರಾದ ಕೊಲ್ಕತ್ಕಾ ನೈಟ್ ರೈಡರ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಇಂದು ನಡೆಯುವ ಐಪಿಎಲ್ ಪಂದ್ಯದಲ್ಲಿ ಕಠಿಣ ಸವಾಲನ್ನು ಎದುರಿಸಲಿದೆ.
ಕೆಕೆಆರ್ ಪ್ರಸಕ್ತ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಮೂರು ಜಯ ಮತ್ತು ಎರಡು ಸೋಲು ಹಾಗೂ ಮಳೆಯಿಂದಾಗಿ ರದ್ದಾದ ಪಂದ್ಯದಿಂದ 7 ಪಾಯಿಂಟ್ ಗಳಿಸಿದೆ. ಸಿಎಸ್ಕೆ 6 ಪಂದ್ಯಗಳಲ್ಲಿ ಕೇವಲ ಒಂದು ಸೋಲು ಅನುಭವಿಸಿ ಎರಡನೇ ಸ್ಥಾನದಲ್ಲಿ ಸ್ಥಿರವಾಗಿದೆ.
ಮಹೇಂದ್ರ ಸಿಂಗ್ ಧೋನಿ ಬಳಗವು ತವರು ಮೈದಾನದಲ್ಲಿ ಮೇಲುಗೈ ಪಡೆದಿದ್ದು, ಕಿಂಗ್ಸ್ ಇಲೆವನ್ ವಿರುದ್ಧ 97 ರನ್ ಜಯಗಳಿಸಿದೆ. ಚೆನ್ನೈ ಬ್ಯಾಟಿಂಗ್ ಕ್ರಮಾಂಕದಲ್ಲಿ ಡ್ವೇನ್ ಸ್ಮಿತ್, ಮೆಕಲಮ್, ಸುರೇಶ್ ರೈನಾ ಮತ್ತು ಧೋನಿ ಮಿಂಚಿದ್ದರೆ ಬೌಲಿಂಗ್ ಕೂಡ ಸವಾಲಿನಿಂದ ಕೂಡಿದೆ.
ಆಶಿಶ್ ನೆಹ್ರಾ ಮತ್ತು ಈಶ್ವರ್ ಪಾಂಡೆ ನೇತೃತ್ವದಲ್ಲಿ ಸಿಎಸ್ಕೆಯ ಬೌಲಿಂಗ್ ಬತ್ತಳಿಕೆಯು ಪೂರ್ಣ ಸಜ್ಜಾಗಿದೆ. ಕಳಪೆ ಪ್ರದರ್ಶನದಿಂದ ಸೂಕ್ಷ್ಮ ಪರಿಶೀಲನೆಗೆ ಒಳಗಾಗಿದ್ದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡ ಹಿಂದಿನ ಪಂದ್ಯದಲ್ಲಿ ಮೂರು ಕಿಂಗ್ಸ್ ಇಲೆವನ್ ವಿಕೆಟ್ ಪಡೆದು ಎದುರಾಳಿ ಬೆನ್ನೆಲಬು ಮುರಿದಿದ್ದರು.
ಈ ನಡುವೆ ಕೆಕೆಆರ್ ಮಳೆಯಿಂದ ರದ್ದಾದ ಪಂದ್ಯಕ್ಕೆ ಮುಂಚೆ ಸನ್ರೈಸರ್ಸ್ ತಂಡಕ್ಕೆ ಸೋತಿತ್ತು. ಇದರಿಂದಾಗಿ ತಂಡದ ಬ್ಯಾಟಿಂಗ್ ದೌರ್ಬಲ್ಯ ಬೆಳಕಿಗೆ ಬಂದಿತ್ತು. ಗೌತಮ್ ಗಂಭೀರ್ ನೇತೃತ್ವದ ಬ್ಯಾಟಿಂಗ್ ಅಸ್ಥಿರತೆಯಿಂದ ಕೂಡಿದ್ದರೆ, ಬೌಲಿಂಗ್ ದಾಳಿ ಆತಂಕಕ್ಕೆ ಕಾರಣವಾಗಿದೆ.