ಕಳೆದ ಬಾರಿ ಟೀಂ ಇಂಡಿಯಾದ ವಿಶ್ವಕಪ್ ಜಯದಲ್ಲಿ ಭಾಗಿಯಾಗಿದ್ದ ಆಫ್ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಯಶಸ್ಸಿಗೆ ಭಾರತೀಯ ಕ್ರಿಕೆಟಿಗರ ಸುವರ್ಣ ಪೀಳಿಗೆ ಕಾರಣ ಎಂದು ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಕೈಕೆಳಗೆ ಆಟವಾಡಿದ ತಾವು ಅದೃಷ್ಟವಂತರು ಎಂದು ಹೇಳಿದರು.
ಅಂತಹ ಹಿರಿಯರ ಮಾರ್ಗದರ್ಶನದಲ್ಲಿ ಮತ್ತು ಸಮೃದ್ಧ ಕ್ರಿಕೆಟ್ ಜ್ಞಾನ ಹೊಂದಿರುವ ಅವರ ಕೈಕೆಳಗೆ ಆಡಿದ್ದು ನನ್ನ ಅದೃಷ್ಟ ಎಂದು ನುಡಿದರು ಎಂದು ಭಾರತದ ಅತ್ಯಧಿಕ ವಿಕೆಟ್ ಗಳಿಸಿದ ಆಫ್ಸ್ಪಿನ್ನರ್ ಪ್ರತಿಕ್ರಿಯಿಸಿದ್ದಾರೆ.
ಈ ಆಟಗಾರರಿಗೆ ನಾನು ಋಣಿಯಾಗಿದ್ದೇನೆ. ಅವರು ನನ್ನ ವೃತ್ತಿಜೀವನದಲ್ಲಿ ದೊಡ್ಡ ಪಾತ್ರ ವಹಿಸಿದರು ಎಂದು ಶ್ಲಾಘಿಸಿದರು. ಸ್ಥಳೀಯ ಹೀರೋ ಗಂಗೂಲಿಯನ್ನು ಕೂಡ ಅವರು ಹೊಗಳಿ ಭಾರತವನ್ನು ಮುನ್ನಡೆಸಿದ ಅತ್ಯುತ್ತಮ ನಾಯಕ ಎಂದರು. ಹರ್ಭಜನ್ ಸಿಂಗ್ ಕ್ರಿಕೆಟ್ ಸಂಸ್ಥೆಯ ಮೊದಲ ಪೂರ್ವ ಭಾರತ ಕೇಂದ್ರವನ್ನು ಕೋಲ್ಕತಾದ ರಾಜರ್ಹತ್ ನ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.