ಭಾರತದಿಂದ ಯಾವುದೇ ಆಕ್ರಮಣದ ವಿರುದ್ಧ ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವ ಸಾಮರ್ಥ್ಯವು ನಮ್ಮ ಸೇನಾ ಪಡೆಗಳಿಗಿದೆ ಎಂದು ಪಾಕಿಸ್ತಾನ ಪ್ರತಿಪಾದಿಸಿದೆ. ಭಾರತದ ಸೇನಾ ಚೀಫ್ ಜನರಲ್ ದಲ್ಬೀರ್ ಸಿಂಗ್ ಭಾರತ ಕಿರು ಯುದ್ಧಗಳಿಗೆ ಸಿದ್ಧವಾಗಿದೆ ಎಂಬ ಹೇಳಿಕೆಯನ್ನು ತಳ್ಳಿಹಾಕುತ್ತಾ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಪಾಕಿಸ್ತಾನ ಹೊಸ ವಿಧಾನ ಬಳಸುತ್ತಿದ್ದು, ಇತರೆ ಪ್ರದೇಶಗಳಿಗೆ ಹಿಂಸೆಯ ಮಾರ್ಗವನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ ಕ್ಷಿಪ್ರ ಮತ್ತು ಕಿರು ಯುದ್ಧಗಳಿಗೆ ಭಾರತ ಸಿದ್ಧವಾಗಿದೆ ಎಂದು ಜ.ಸಿಂಗ್ ನಿನ್ನೆ ಹೇಳಿದ್ದರು. ಜ. ಸಿಂಗ್ ಎಚ್ಚರಿಕೆಯನ್ನು ಕೇವಲ ಉತ್ಪ್ರೇಕ್ಷಿತ ಎಂದು ತಳ್ಳಿಹಾಕಿದ ಅವರು ಅಣ್ವಸ್ತ್ರ ನೆರೆಯ ರಾಷ್ಟ್ರಗಳ ನಡುವೆ ಸೀಮಿತ ಯುದ್ಧ ನಡೆಯುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.
ಜ. ಸಿಂಗ್ ಅವರ ಪ್ರತಿಕ್ರಿಯೆಗೆ ಪಾಕಿಸ್ತಾನ ಔಪಚಾರಿಕೆ ಪ್ರತಿಕ್ರಿಯೆಯನ್ನು ಇನ್ನೂ ನೀಡಿಲ್ಲ. ಕಳೆದ ವಾರ ರಕ್ಷಣಾ ಸಚಿವ ಕವಾಜಾ ಅಸೀಫ್ ಪಾಕಿಸ್ತಾನ ಮತ್ತು ಭಾರತ ನಡುವೆ ಸೀಮಿತ ಯುದ್ಧದ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ನಮ್ಮ ಮೇಲೆ ಯಾವುದೇ ದಾಳಿಯು ಪಾಕಿಸ್ತಾನದ ಪ್ರತಿಕ್ರಿಯೆ ಮತ್ತು ಕಾಲದ ಆಯ್ಕೆಯನ್ನು ಅವಲಂಬಿಸಿದೆ ಎಂದಿದ್ದರು.