ಸಾರ್ಕ್ ರಾಷ್ಟ್ರಗಳ ಗೃಹ ಸಚಿವರ 7 ನೇ ಸಮ್ಮೇಳನದಲ್ಲಿ ಭಾಗವಹಿಸಲಿರುವ ಭಾರತದ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪಾಕಿಸ್ತಾನ ಪ್ರವೇಶಿಸಲು ಅವಕಾಶ ನೀಡಬಾರದೆಂದು ಜಮಾತ್ ಉದ್–ದವಾ (ಜೆಯುಡಿ) ಸಂಘಟನೆ ಮುಖ್ಯಸ್ಥ , ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ಪಾಕ್ ನವಾಜ್ ಶರೀಫ್ ಸರ್ಕಾರಕ್ಕೆ ಖಡಕ್ ಆಗಿ ಸೂಚನೆ ನೀಡಿದ್ದಾನೆ.
ಕಾಶ್ಮೀರಿಗಳಿಗೆ ಸಹಾಯ ಮಾಡಲು ಪಾಕಿಸ್ತಾನ ಸರ್ಕಾರಕ್ಕೆ ಕಾಶ್ಮೀರಕ್ಕೆ ಭೇಟಿ ನೀಡಲು ಸಿಂಗ್ ಅನುಮತಿ ನೀಡಿದರೆ ಅವರಿಗೆ ಪಾಕಿಸ್ತಾನ ಪ್ರವೇಶಿಸಲು ಅವಕಾಶ ನೀಡುವ ಕುರಿತು ಶರೀಫ್ ಯೋಚಿಸಬಹುದು ಎಂದಾತ ಹೇಳಿದ್ದಾನೆ. ಅಷ್ಟೇ ಅಲ್ಲದೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡುವವರೆಗೆ ಭಾರತದೊಂದಿಗಿರುವ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದಾತ ಪಾಕ್ ಸರ್ಕಾರಕ್ಕೆ ವ್ಯಾಪಾರಿಗಳಿಗೆ ಸಲಹೆ ನೀಡಿದ್ದಾನೆ.
ಅಮಾಯಕ ಕಾಶ್ಮೀರಿಗಳ ಸಾವಿಗೆ ಕಾರಣವಾದ ರಾಜನಾಥ್ ಅವರನ್ನು ಸಮಾವೇಶಕ್ಕೆ ಸ್ವಾಗತಿಸುವ ಮೂಲಕ ಪಾಕಿಸ್ತಾನ ಸರ್ಕಾರ ಕಾಶ್ಮೀರ ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ಅವಮಾನ ಮಾಡುತ್ತಿದೆ. ಸಿಂಗ್ ಅವರು ಇಸ್ಲಾಮಾಬಾದ್ಗೆ ಬಂದರೆ ಜೆಯುಡಿ ಕರಾಚಿ, ಪೇಶಾವರ, ಮುಲ್ತಾನ್, ಫೈಸಲಾಬಾದ್, ಮುಜಾಫರಾಬಾದ್ ಸೇರಿದಂತೆ ಇನ್ನಿತರ ನಗರಗಳಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದಾತ ಎಚ್ಚರಿಕೆ ನೀಡಿದ್ದಾನೆ.
ಇಸ್ಲಾಮಾಬಾದ್ನಲ್ಲಿ ಆಗಸ್ಟ್ 4ರಂದು ನಡೆಯಲಿರುವ ಸಾರ್ಕ್ ರಾಷ್ಟ್ರಗಳ ಗೃಹಸಚಿವರ ಸಮ್ಮೇಳನ ನಡೆಯಲಿದ್ದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಸ್ಲಾಮಾಬಾದ್ಗೆ ಪ್ರಯಾಣ ಬೆಳೆಸಲಿದ್ದಾರೆ. ಆಗಸ್ಟ್ 3 ಮತ್ತು 4 ರಂದು ಸಭೆ ನಡೆಯಲಿದೆ. ಶೃಂಗ ಸಭೆ ಸಂದರ್ಭದಲ್ಲಿ ಸಿಂಗ್, ಪಾಕ್ ಪ್ರಧಾನಿ ನವಾಜ್ ಷರೀಫ್ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ.
ಪಠಾಣಕೋಟ್ ವಾಯುನೆಲೆ ಮೇಲಿನ ದಾಳಿಯ ಬಳಿಕ ಸಂಪುಟ ದರ್ಜೆ ಸಚಿವರೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಕಾಶ್ಮೀರ ಹಿಂಸಾಚಾರ ಕುರಿತಂತೆ ಮೂಗು ತೂರಿಸಿದ್ದ ಪಾಕಿಸ್ತಾನಕ್ಕೆ ನಮ್ಮ ಆಂತರಿಕ ವಿಷಯಗಳಲ್ಲಿ ಮಧ್ಯ ಪ್ರವೇಶಿಸದಂತೆ ಸಿಂಗ್ ತಕ್ಕ ಉತ್ತರ ನೀಡಿದ್ದರು. ಕಾಶ್ಮೀರದಲ್ಲಿ ನಡೆದ ಹಿಂಸಾಚಾರಕ್ಕೆ ಪಾಕಿಸ್ತಾನವೇ ಕಾರಣ ಎಂದು ಆರೋಪಿಸಿದ್ದ ಸಿಂಗ್,ಶ್ರೀನಗರದಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಶಸ್ತ್ರಾಸ್ತಗಳನ್ನು ಕೈಗೆತ್ತಿಕೊಳ್ಳಲು ಯುವಕರನ್ನು ಸರಿಯಲ್ಲ ಎಂಬುದನ್ನು ನೆರೆಯ ರಾಷ್ಟ್ರ ಅರ್ಥ ಮಾಡಿಕೊಳ್ಳಬೇಕು ಎಂದು ಖಡಕ್ ಆಗಿ ಸೂಚನೆ ನೀಡಿದ್ದರು.
ಜಮ್ಮು ಮತ್ತು ಕಾಶ್ಮೀರ ಸದ್ಯದಲ್ಲಿಯೇ ಪಾಕಿಸ್ತಾನವನ್ನು ಸೇರಿಕೊಳ್ಳಲಿದೆ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಈಚೆಗೆ ಪಿಓಕೆ ಚುನಾವಣೆಯನ್ನು ಗೆದ್ದುಕೊಂಡ ಸಂದರ್ಭದಲ್ಲಿ ಹೇಳಿರುವುದು ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಹದಗೆಡಲು ಕಾರಣವಾಗಿದೆ.
ಷರೀಫ್ ಅವರ ಈ ಅಪಾಯಕಾರಿ ಕನಸು ಭೂಮಿ ಇರುವಷ್ಟು ಕಾಲ ನನಸಾಗುವುದಿಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಭೂಮಿಯ ಮೇಲಿನ ಈ ಸ್ವರ್ಗವನ್ನು ಭಯೋತ್ಪಾದಕರ ನರಕವನ್ನಾಗಿ ಮಾಡಲು ನಿಮ್ಮಿಂದ ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಗುಡುಗಿದ್ದರು.
ಸಾರ್ಕ್ ಆಂತರಿಕ / ಗೃಹ ಮಂತ್ರಿಗಳು ಮೊದಲ ಸಭೆ ಮೇ 11 , 2006 ರಂದು ಢಾಕಾದಲ್ಲಿ ನಡೆದಿತ್ತು. ಎರಡನೆಯ ಸಭೆ 2007ರಲ್ಲಿ ನವದೆಹಲಿಯಲ್ಲಿ ನಡೆದಿತ್ತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.