ಭೂ ಹಂಚಿಕೆ ವಿವಾದ ಹಿನ್ನೆಲೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ.
ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರಿಗೆ ಸಹ ಕೆಲವು ಪ್ರಶ್ನೆಗಳನ್ನು ಕೇಳಿರುವ ಕಾಂಗ್ರೆಸ್ ಪ್ರಕರಣ ತನಿಖೆಗೆ ಸುಪ್ರೀಂಕೋರ್ಟ್ ನೇತೃತ್ವದ ಎಸ್ಐಟಿ ಸ್ಥಾಪನೆಗೆ ಆಗ್ರಹಿಸಿದೆ.
ಸಾರ್ವಜನಿಕ ಭೂಮಿಯನ್ನು ಸ್ವಜನಪಕ್ಷಪಾತದಿಂದ ತಮ್ಮವರಿಗೆ ಹಂಚಿಕೆ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಾರಣವಾಗಿದ್ದಾರೆ ಎಂದಿರುವ ಕಾಂಗ್ರೆಸ್ ಪ್ರಕರಣದಲ್ಲಿ ಪರಿಶುದ್ಧರಾಗಿ ಹೊರಬನ್ನಿ ನೋಡೋಣ ಎಂದು ಸವಾಲು ಹಾಕಿದೆ.
ಮೋದಿಯವರು ಮುಖ್ಯಮಂತ್ರಿಯಾಗಿದ್ದ ಗುಜರಾತ್ನ ಬಿಜೆಪಿ ಸರ್ಕಾರ 2010ನೇ ಇಸವಿಯಲ್ಲಿ ಗಿರ್ ಸಿಂಹ ಅಭಯಾರಣ್ಯದ ಪಕ್ಕದಲ್ಲಿರುವ 250 ಎಕರೆ, 125 ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಸರ್ಕಾರ ಕೇವಲ ಒಂದೂವರೆ ಕೋಟಿ ರೂಪಾಯಿಗೆ ಆನಂದಿ ಬೆನ್ ಮಗಳು ಅನಾರ್ ಬೆನ್ ಮಾಲೀಕತ್ವದ ಕಂಪನಿಗ ಮಾರಾಟ ಮಾಡಲಾಗಿದೆ ಎಂಬುದು ಕಾಂಗ್ರೆಸ್ ಆರೋಪ ಮಾಡಿದೆ. ಆಗ ಆನಂದಿ ಬೆನ್ ಪಟೇಲ್ ಕಂದಾಯ ಸಚಿವರಾಗಿದ್ದರು.
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ. ಇದು ಭ್ರಷ್ಟಾಚಾರ ಕಡೆಗೆ ಶೂನ್ಯ ಸೈರಣೆ ಹೊಂದಿದ್ದೇನೆ ಎಂದು ಪ್ರತಿಪಾದಿಸುವ ಪ್ರಧಾನಿಯವರಿಗೆ ನೇರವಾಗಿ ಸಂಬಂಧಿಸಿದೆ ವಿಚಾರ ಎಂದು ಹಿರಿಯ ಕಾಂಗ್ರೆಸ್ ನಾಯಕ ಆನಂದ ಶರ್ಮಾ ಹೇಳಿದ್ದಾರೆ.