ಪ್ರಧಾನಮಂತ್ರಿ ಮೋದಿ ತಮ್ಮ ಸ್ವಾತಂತ್ರ್ಯ ಭಾಷಣದಲ್ಲಿ ಬಲೂಚಿಸ್ತಾನದ ವಿಷಯ ಪ್ರಸ್ತಾಪಿಸಿದ ಕೂಡಲೇ ಪಾಕಿಸ್ತಾನ ಸೇನೆ ಬಲೂಚಿಸ್ತಾನದ ನಿವಾಸಿಗಳ ಮೇಲೆ ರಾಸಾಯನಿಕ ಅಸ್ತ್ರ ಪ್ರಯೋಗಿಸಿ ಸೇಡು ತೀರಿಸಿಕೊಂಡಿತೆಂದು ಮಾನವ ಹಕ್ಕು ಕಾರ್ಯಕರ್ತರು ಆರೋಪಿಸಿದ್ದಾರೆ.
ನರೇಂದ್ರ ಮೋದಿ ಸರ್ವ ಪಕ್ಷಗಳ ಸಭೆಯಲ್ಲಿ ಮತ್ತು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಕ್ಷುಬ್ಧ ಪ್ರಾಂತ್ಯ ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಮಾನವ ಹಕ್ಕು ಉಲ್ಲಂಘನೆ ಮಾಡಿದ ವಿಷಯವನ್ನು ಪ್ರಸ್ತಾಪಿಸಿದ್ದರು. ಇದಾದ ಬಳಿಕ ಪಾಕ್ ಸೇನೆ ಬೆಲೂಚಿ ಜನರನ್ನು ನಿಷ್ಕ್ರಿಯಗೊಳಿಸಲು ರಾಸಾಯನಿಕ ಸಿಂಪಡಿಕೆ ಮಾಡಿ ಬಳಿಕ ಗುಂಡಿಟ್ಟು ಕೊಂದಿತೆಂದು ಕಾರ್ಯಕರ್ತರು ಆರೋಪಿಸಿದರು.
ಅಮಾಯಕ ಜನರನ್ನು ಕೊಂದ ಸೇನೆ ಮೃತ ದೇಹಗಳ ಕಣ್ಣುಗಳನ್ನು ಕಿತ್ತು ಮಧ್ಯಕಾಲೀನ ಯುಗದ ಅನಾಗರಿಕ ಕ್ರೌರ್ಯ ಪ್ರದರ್ಶನ ಮಾಡಿದೆಯೆಂದು ಅವರು ಆರೋಪಿಸಿದರು. ಪಾಕಿಸ್ತಾನ ಸೇನೆಯ ಕೋಪಕ್ಕೆ ಬಲೂಚಿಸ್ತಾನದ ಬೊಲಾನ್ ಪ್ರದೇಶ ಜೀವಂತ ಸಾಕ್ಷಿಯಾಗಿದೆ.
ಕಳೆದ ಎರಡು ವಾರಗಳಲ್ಲೇ ಪಾಕಿಸ್ತಾನ ಸೇನೆ 50ಕ್ಕೂ ಹೆಚ್ಚು ಜನರನ್ನು ಕೊಂದಿದ್ದು, ಬಲೂಚಿಸ್ತಾನದಲ್ಲಿ ಸೇನೆಯ ನಿರ್ದಯ ಕೃತ್ಯಗಳು ಹೊಸದೇನಲ್ಲ. ಆದರೆ ಪ್ರಧಾನಿ ಮೋದಿ ಕೆಂಪು ಕೋಟೆ ಭಾಷಣದ ಬಳಿಕ ಸೇನೆಯ ಕ್ರೌರ್ಯದ ಪ್ರಮಾಣ ಹೆಚ್ಚಾಗಿದೆ. ಕಾಚಿ ಬೊಲಾನ್, ಕ್ವೆಟ್ಟಾ, ದೇರಾ ಬುಗ್ಟಿ, ಮಸ್ತಾಂಗ್ ಮತ್ತು ಅವಾರನ್ನಿಂದ ಅಪಾರ ಪ್ರಮಾಣದ ಪುರುಷರನ್ನು ಸೇನೆ ಅಪಹರಿಸಿದೆ.