ನಾಲ್ವರು ಭಾರತೀಯರನ್ನು ಅಪಹರಿಸಿದ್ದ ಐಸಿಸ್ ಉಗ್ರಗಾಮಿಗಳು ಇಬ್ಬರು ಭಾರತೀಯರನ್ನು ಬಿಡುಗಡೆ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬೆಳಿಗ್ಗೆಯಿಂದ ಕೇಂದ್ರ ಸರ್ಕಾರ ಭಾರತೀಯರನ್ನು ಬಿಡುಗಡೆ ಮಾಡಿಸುವ ಪ್ರಯತ್ನ ಮಾಡಿತ್ತು. ಕನ್ನಡಿಗರಾದ ಲಕ್ಷ್ಮಿಕಾಂತ್, ವಿಜಯಕುಮಾರ್ ಇಬ್ಬರೂ ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆಂದು ವರದಿಯಾಗಿದೆ.
ಮತ್ತಿಬ್ಬರು ಭಾರತೀಯರ ರಕ್ಷಣೆಗೆ ಸರ್ಕಾರ ಪ್ರಯತ್ನ ನಡೆಸಿದೆ. ಲಿಬಿಯಾದ ತ್ರಿಪೋಲಿಯಾದಲ್ಲಿದ್ದ ಭಾರತ ರಾಯಭಾರ ಕಚೇರಿ ಅಧಿಕಾರಿಗಳು ಭಾರತೀಯರ ಬಿಡುಗಡೆಗೆ ಶತಪ್ರಯತ್ನ ಮಾಡಿದ್ದರು. ಆಂಧ್ರಪ್ರದೇಶದ ಇನ್ನಿಬ್ಬರು ಇನ್ನೂ ಲಿಬಿಯಾದಲ್ಲಿ ಐಸಿಸ್ ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಅವರನ್ನು ಕೂಡ ಬಿಡಿಸಬೇಕಾಗಿದೆ. ಇಬ್ಬರು ಭಾರತೀಯರನ್ನು ಬಿಡುಗಡೆ ಮಾಡಿರುವ ವಿಷಯವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಖಚಿತಪಡಿಸಿದರು.
ರಕ್ಷಣೆಯಾದ ಭಾರತೀಯರು ಶಿರ್ತೆ ವಿವಿಗೆ ಸ್ಥಳಾಂತರಗೊಳಿಸಲಾಗಿದೆ. ವಿದೇಶಾಂಗ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ಈ ವಿಷಯದ ಮಾಹಿತಿಯನ್ನು ಟ್ವಿಟರ್ನಲ್ಲಿ ನೀಡಿದ್ದಾರೆ. ಆದರೆ ಯಾವ ವಿಧಾನದ ಮೂಲಕ ಅವರಿಬ್ಬರನ್ನು ಬಿಡಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಉಗ್ರರ ವಶದಲ್ಲಿರುವ ತೆಲಂಗಾಣ ಹಾಗೂ ಆಂಧ್ರದ ಇಬ್ಬರೂ ಸೇಫ್ ಆಗಿದ್ದಾರೆಂಬ ವರದಿಗಳು ಬಂದಿವೆ.