ಮರಣದಂಡನೆ ಎದುರಿಸುತ್ತಿರುವ ಭಾರತೀಯ ಸರಬ್ಜಿತ್ ಅವರಿಗೆ ಶಿಕ್ಷೆ ಜಾರಿಗೊಳಿಸುವುದನ್ನು 'ಮುಂದಿನ ಆದೇಶದ ವರೆಗೆ' ಸ್ಥಗಿತಗೊಳಿಸಲಾಗಿದೆ ಎಂದು ಅವರ ವಕೀಲರು ಶನಿವಾರ ಹೇಳಿದ್ದಾರೆ.
ಈ ಮಧ್ಯೆ, ಸರಬ್ಜಿತ್ ಮರಣ ದಂಡನೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಂತರಿಕ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸರಬ್ಜಿತ್ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸುವ ಸಾಧ್ಯತೆಗಳಿವೆ ಎಂದು ತಿಳಿಸಿರುವ ವಕೀಲರು, ಆತ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸಿರುವುದರಿಂದ ಆತನ ಬಿಡುಗಡೆಯಾಗಬಹುದು ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
1990 ರಲ್ಲಿ ಲಾಹೋರಿನಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಕಾರಣ ಎಂಬ ಆಪಾದನೆಗಳ ಮೇಲೆ ಬಂಧಿತರಾಗಿದ್ದ ಸಬರ್ಜಿತ್ ಕಳೆದ 18 ವರ್ಷಗಳಿಂದ ಪಾಕಿಸ್ತಾನಿ ಜೈಲಿನಲ್ಲಿದ್ದಾರೆ.