ಭಾರತ ಮತ್ತು ಪಾಕಿಸ್ತಾನ ಉಭಯ ರಾಷ್ಟ್ರಗಳು ಬಾಕಿ ಇರುವ ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ನಿರ್ಧರಿಸಿರುವುದನ್ನು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸ್ವಾಗತಿಸಿದ್ದಾರೆ.
ಭಾರತದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ಕುರಿತು ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ಅವರಿಂದ ವಿವರಣೆ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜರ್ದಾರಿ, ಉಭಯ ದೇಶಗಳೂ ಬಾಕಿ ಇರುವ ವಿವಾದಗಳನ್ನು ಪರಸ್ಪರ ಸಹಮತದ ಮೂಲಕ ಪರಿಹರಿಸಲು ಬದ್ಧವಾಗಿರುವುದನ್ನು ಪಾಕಿಸ್ತಾನವು ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.
ಮಾತುಕತೆಯ ನಂತರ ಉಭಯ ದೇಶಗಳು ಶಾಂತಿಯುತ ಮತ್ತು ಸಹಕಾರದ ನೆಲೆಯಲ್ಲಿ ಭಯೋತ್ಪಾದನೆ ನಿಗ್ರಹ, ವ್ಯಾಪಾರ ವಹಿವಾಟು ಹಾಗೂ ವಿಭಜಿತ ಕಾಶ್ಮೀರ ಪ್ರದೇಶಗಳ ನಡುವೆ ಸಂಚಾರಕ್ಕೆ ಅನುಮತಿ ನೀಡಲು ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಹೊಸ ಅಧ್ಯಾಯವನ್ನು ಆರಂಭಿಸಿವೆ ಎಂದು ಜರ್ದಾರಿ ವರ್ಣಿಸಿದ್ದಾರೆ.