ಪೆಟ್ರೊಕೆಮಿಕಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸೇರಿದಂತೆ ಒಟ್ಟು ಮೂವರು ಭಾರತೀಯ ಪ್ರಜೆಗಳನ್ನು ಅಪಹರಿಸಿರುವ ಘಟನೆ ನೈಜಿರಿಯಾದಲ್ಲಿ ಶನಿವಾರ ಶನಿವಾರ ಸಂಭವಿಸಿದೆ.
ಕೆಲವೇ ವಾರಗಳಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ನಡೆಯುತ್ತಿರುವ ಮೂರನೇ ಘಟನೆ ಇದಾಗಿದೆ ಎಂದು ಹೇಳಲಾಗಿದೆ.
ಈ ಮೂವರ ಪೈಕಿ ಒಬ್ಬರನ್ನು ದೇಬಾಶಿಷ್ ಕೆ.ದವಲೆ ಎಂದು ಪತ್ತೆ ಹಚ್ಚಲಾಗಿದ್ದು, ಇನ್ನಿಬ್ಬರನ್ನು ಗುರುತಿಸಲು ಸಾಧ್ಯವಾಗಿಲ್ಲ. ದಕ್ಷಿಣ ನೈಜಿರಿಯಾದ ಪೊರ್ಟ್ ಹಾರ್ಕೊಟ್ನ ಮನೆಗಳಲ್ಲಿ ವಾಸವಾಗಿದ್ದ ಈ ಭಾರತೀಯರ ಮೇಲೆ ಶನಿವಾರ ಅಪಹರಣಕಾರರು ಗುಂಡಿನ ದಾಳಿ ನಡೆಸಿ ಅಪಹರಿಸಿದ್ದಾರೆ. ಈ ದಾಳಿಯಲ್ಲಿ ನೈಜಿರಿಯಾದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಘಟನೆಯು ನೈಜಿರಿಯಾದಲ್ಲಿರುವ ಭಾರತದ ಸಾವಿರಾರು ಉದ್ಯೋಗಿಗಳು ಹಾಗೂ ಅವರ ಕುಟುಂಬದ ಮೇಲೆ ಭಾರೀ ಪರಿಣಾಮ ಬೀರಿದ್ದು, ಅವರು ಸ್ವದೇಶಕ್ಕೆ ಮರಳುವ ವಿಚಾರ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಅಪಹರಣಕ್ಕೊಳಗಾಗಿರುವ ಈ ಮೂವರು ಭಾರತೀಯರನ್ನು ಸುಭದ್ರವಾಗಿ ಮರಳಲು ಬೇಕಾದ ಎಲ್ಲ ಕ್ರಮ ಕೈಗೊಳ್ಳುವಂತೆ ನೈಜಿರಿಯಾ ಸರಕಾರದೊಂದಿಗೆ ಹಾಗೂ ಅಲ್ಲಿನ ಭಾರತದ ಉನ್ನತ ಆಯುಕ್ತರೊಂದಿಗೆ ಸಂಪರ್ಕ ಇಟ್ಟುಕೊಳ್ಳಲಾಗಿದೆ ಎಂದು ಕೇಂದ್ರ ವಿದೇಶಾಂಗ ರಾಜ್ಯ ಖಾತೆ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ.