ಅಪ್ಘಾನಿಸ್ತಾನ ಕುರಿತು ಬಾನ್ನಲ್ಲಿ ಡಿಸೆಂಬರ್ 5 ರಂದು ನಡೆಯಲಿರುವ ಜಾಗತಿಕ ಸಮಾವೇಶದಲ್ಲಿ ಭಾಗವಹಿಸದಿರಲು ಪಾಕಿಸ್ತಾನ ನಿರ್ಧರಿಸಿದೆ. ಅಫ್ಘಾನಿಸ್ತಾನ- ಪಾಕ್ ಗಡಿ ಭಾಗದಲ್ಲಿರುವ ಮಹಮದ್ ಬುಡಕಟ್ಟು ಮೇಲೆ ನ್ಯಾಟೋ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ 24 ಪಾಕ್ ಸೈನಿಕರು ಮೃತಪಟ್ಟಿದ್ದರು. ಇದರಿಂದ ತೀವ್ರವಾಗಿ ಆಕ್ರೋಶಗೊಂಡಿರುವ ಪಾಕಿಸ್ತಾನ ಈ ನಿರ್ಧಾರ ಕೈಗೊಂಡಿದೆ.
ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರ ನೇತೃತ್ವದಲ್ಲಿ ಲಾಹೋರ್ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಅಫ್ಘಾನ್ ಸಮಾವೇಶದಲ್ಲಿ ಭಾಗವಹಿಸದಿರಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ನೇಷನ್ ಪತ್ರಿಕೆ ವರದಿ ಮಾಡಿದೆ.
ದೇಶದ ಜನರು ಸರಕಾರದ ನಿಲುವನ್ನು ಬೆಂಬಲಿಸುವ ಮೂಲಕ ಸವಾಲುಗಳನ್ನು ಎದುರಿಸಲು ಸಹಕರಿಸುವಂತೆ ಪ್ರಧಾನಿ ಗಿಲಾನಿ ಮನವಿ ಮಾಡಿದ್ದಾರೆ.
ನ್ಯಾಟೋ ಪಡೆಗಳು ತಮ್ಮ ದೇಶದ ಸೇನಾ ಚೆಕ್ ಪೋಸ್ಟ್ ಮೇಲೆ ದಾಳಿ ನಡೆಸಿದ ನಂತರ ಆಕ್ರೋಶಗೊಂಡಿದ್ದ ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿರುವ ನ್ಯಾಟೋ ಪಡೆಗೆ ಎಲ್ಲ ರೀತಿಯ ಸರಬರಾಜನ್ನೂ ಸ್ಥಗಿತಗೊಳಿಸಿತ್ತು ಹಾಗೂ ಬಲೂಚಿಸ್ತಾನದಲ್ಲಿರುವ ಶಂಸಿ ವಾಯು ನೆಲೆಯನ್ನು ತೆರವುಗೊಳಿಸಲು 15 ದಿನಗಳ ಗಡುವು ನೀಡಿತ್ತು.