ಚಿಕಾಗೊ: ಭಾರತೀಯ ರಾಜಕಾರಣಿಗಳ ಲಂಚ ಹಗರಣ ಸಾಗರದಾಚೆಗೆ ವ್ಯಾಪಿಸಿದ್ದು, ಕಾಂಗ್ರೆಸ್ ಪಕ್ಷದ ಎಂಪಿ ಸೇರಿದಂತೆ 6 ಜನರು 18.5 ದಶಲಕ್ಷ ಡಾಲರ್ ಮೌಲ್ಯದ ಲಂಚ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಅಮೆರಿಕ ಕೋರ್ಟ್ ಆರೋಪಿಸಿದೆ. ಆಂಧ್ರಪ್ರದೇಶದಲ್ಲಿ ಟೈಟಾನಿಯಂ ಅದಿರುಗಳ ಗಣಿಗಾರಿಕೆಗೆ ಅವಕಾಶ ನೀಡುವುದಕ್ಕಾಗಿ ಭಾರತದ ಸರ್ಕಾರಿ ಅಧಿಕಾರಿಗಳಿಗೆ ಈ ಲಂಚದ ಹಣವನ್ನು ನೀಡಿರುವುದು ಬೆಳಕಿಗೆ ಬಂದಿರುವುದಾಗಿ ಅದು ತಿಳಿಸಿದೆ.ರಾಜ್ಯಸಭೆ ಎಂಪಿ ಕೆ.ವಿ.ಪಿ. ರಾಮಚಂದ್ರ ರಾವ್ ಮತ್ತು ಇನ್ನೂ ಐವರ ವಿರುದ್ಧ ಒಳಸಂಚು, ಹಣದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆರೋಪ ಹೊರಿಸಲಾಗಿದೆ.
ರಾವ್ ಅವರಲ್ಲದೇ ಹಂಗರಿ ಉದ್ಯಮಿ ಆಂಡ್ರಾಸ್ ನಾಪ್, ಉಕ್ರೇನ್ನ ಸುರೇನ್ ಗೆವರ್ಗಿಯನ್ , ಗಜೇಂದ್ರ ಲಾಲ್, ಶ್ರೀಲಂಕಾದ ಪೆರಿಸ್ವಾಮಿ ಸುಂದರಲಿಂಗಂ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ.ಇನ್ನೊಬ್ಬ ಆರೋಪಿ ಡಿಮಿಟ್ರಿ ಫರ್ಟಾಶ್ ಉಕ್ರೇನ್ ಪೌರನಾಗಿದ್ದು ಮಾ.12ರಂದು ವಿಯೆನ್ನಾದಲ್ಲಿ ಬಂಧಿಸಲಾಗಿತ್ತು. ಫರ್ಟಾಶ್ನನ್ನು ಮಾರ್ಚ್ 21ರಂದು 174 ದಶಲಕ್ಷ ಡಾಲರ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
2006 ರಲ್ಲಿ ಪ್ರತಿವಾದಿಗಳು ಆಂಧ್ರಪ್ರದೇಶದಲ್ಲಿ ಗಣಿಗಾರಿಕೆ ಖನಿಜಗಳ ಪರವಾನಗಿ ಪಡೆಯಲು 18.5 ದಶಲಕ್ಷ ಡಾಲರ್ಗಳಷ್ಟು ಲಂಚ ನೀಡುವುದರಲ್ಲಿ ಭಾಗಿಯಾಗಿದ್ದರು.ಈ ಗಣಿಗಾರಿಕೆ ಪ್ರಾಜೆಕ್ಟ್ನಲ್ಲಿ ಟೈಟಾನಿಯಂ ಉತ್ಪನ್ನಗಳ ಮಾರಾಟದಿಂದ ವಾರ್ಷಿಕ 500 ದಶಲಕ್ಷ ಡಾಲರ್ ತಂದುಕೊಡುವ ನಿರೀಕ್ಷೆಯಿತ್ತು. ಹೆಸರಿಸಲಾಗದ ಚಿಕಾಗೋದಲ್ಲಿರುವ ಕಂಪೆನಿಗೆ ಖನಿಜವನ್ನು ಮಾರಾಟ ಮಾಡುವುದು ಯೋಜನೆಯಾಗಿತ್ತು.