Select Your Language

Notifications

webdunia
webdunia
webdunia
webdunia

ಬ್ರಿಟಿಷರ ನಿದ್ದೆಗೆಡಿಸಿದ್ದ 'ಉಕ್ಕಿನ ಮನುಷ್ಯ' - ಪಟೇಲ್

ಬ್ರಿಟಿಷರ ನಿದ್ದೆಗೆಡಿಸಿದ್ದ 'ಉಕ್ಕಿನ ಮನುಷ್ಯ' - ಪಟೇಲ್
ರಾಜೇಶ್ ಪಾಟೀಲ್
ಹಲವಾರು ಮಹಾನುಭಾವರ ತ್ಯಾಗ ಬಲಿದಾನಗಳ ಮೂಲಕ ಗಳಿಸಿದ ಭಾರತದ ಸ್ವಾತಂತ್ರ್ಯದ ಇತಿಹಾಸ ರೋಚಕವಾದದ್ದು, ದೇಶ ಸ್ವಾತಂತ್ರ್ಯ ಗಳಿಸುವ ನಿಟ್ಟಿನಲ್ಲಿ ಚಳುವಳಿಗೆ ಧುಮುಕಿ ಹೋರಾಟ ನಡೆಸಿದವರು ಅಸಂಖ್ಯಾತ ಮಂದಿ. ಅವರಲ್ಲಿ "ಭಾರತದ ಉಕ್ಕಿನ ಮನುಷ್ಯ" ಎಂದೇ ಕರೆಸಿಕೊಂಡ ವಲ್ಲಭಭಾಯಿ ಪಟೇಲ್ ಕೂಡಾ ಪ್ರಮುಖರು.

ಗುಜರಾತ್‌ನ ನಡಿಯಾಡ್ ಗ್ರಾಮದಲ್ಲಿ ಝವೇರ್‌ ಭಾಯಿ ಮತ್ತು ಲಾಡ್‌ಬಾಯಿ ದಂಪತಿಗಳ ಸುಪುತ್ರರಾಗಿ ರೈತರ ಕುಟುಂಬದಲ್ಲಿ ಜನಿಸಿದ ಅವರು, 1917ರಲ್ಲಿ ಗೆಳೆಯರ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಅಹಮದಾಬಾದ್‌ನ ನೈರ್ಮಲ್ಯ ಆಯಕ್ತರಾಗಿ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ನಾಗರಿಕ ಸಮಸ್ಯೆಗಳ ಕುರಿತಂತೆ ಬ್ರಿಟಿಷ್ ಅಧಿಕಾರಿಗಳ ಮಧ್ಯೆ ಕೆಲ ಬಾರಿ ವಾಗ್ವಾದ ನಡೆಯುತ್ತಿತ್ತು. ಆದರೆ ವಲ್ಲಭಭಾಯಿಯವರಿಗೆ ರಾಜಕೀಯದಲ್ಲಿ ಇಷ್ಟವಿರಲಿಲ್ಲ. ಚಂಪಾರಣ್ಯದಲ್ಲಿ ಗಾಂಧಿ ನೇತೃತ್ವದಲ್ಲಿ ರೈತರ ಪರವಾಗಿ ಬ್ರಿಟಿಷರ ವಿರುದ್ದ ನಡೆಸಿದ ಹೋರಾಟದಲ್ಲಿ ಜಯ ಸಾಧಿಸಿದ ರೀತಿಯನ್ನು ಕಂಡು ಪ್ರಭಾವಿತರಾದ ವಲ್ಲಭಭಾಯಿ ಪಟೇಲ್, ಸ್ವಾತಂತ್ರ್ಯ ಚಳುವಳಿಗೆ ಧುಮುಕುವುದಾಗಿ ಘೋಷಿಸಿದರು. ಪ್ರಪ್ರಥಮ ಬಾರಿಗೆ 1917ರಲ್ಲಿ ಗುಜರಾತ್‌ನ ಬೋರ್ಸಾದ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವಲ್ಲಭಭಾಯಿ ಪಟೇಲರು, ರಾಷ್ಟ್ರಾದ್ಯಂತ ಗಾಂಧೀಜಿಯವರ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಎಂಬ ಮನವಿಯನ್ನು ಬೆಂಬಲಿಸುವಂತೆ ಕರೆ ನೀಡಿದರು.

ND
'ಕರ ನಿರಾಕರಣೆ' ಆಂದೋಲನದ ಅಂಗವಾಗಿ, ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದು ಖೇಡಾ ಜಿಲ್ಲೆಯ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ತೆರಿಗೆ ನೀಡುವುದನ್ನು ತಿರಸ್ಕರಿಸುವಂತೆ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು. ಇದರಿಂದ ಕೆಂಡಾಮಂಡಲವಾದ ಸರಕಾರ ಪೊಲೀಸರನ್ನು ಹಲವು ತಂಡಗಳಾಗಿ ರಚಿಸಿ ಗ್ರಾಮಸ್ಥರ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಿತು. ಸರಕಾರ ಸಾವಿರಾರು ರೈತರನ್ನು ಬಂಧಿಸಿತು. ಇದರಿಂದ ದೇಶಾದ್ಯಂತ ಅನುಕಂಪದ ಅಲೆ ಮೂಡಿ ಬಂದ ಹಿನ್ನೆಲೆಯಲ್ಲಿ ಸರಕಾರ ವಲ್ಲಭಭಾಯಿ ಪಟೇಲ್ ಅವರೊಂದಿಗೆ ಚರ್ಚಿಸಲು ನಿರ್ಧರಿಸಿ ರೈತರ ಒಂದು ವರ್ಷದ ತೆರಿಗೆಯನ್ನು ರದ್ದುಗೊಳಿಸಿತು. ಈ ಘಟನೆಯಿಂದಾಗಿ ಗುಜರಾತ್‌ನಾದ್ಯಂತ ವಲ್ಲಭಭಾಯಿ ಪಟೇಲ್ ಹೀರೋ ಆಗಿ ಕಂಗೊಳಿಸಿ ದೇಶದೆಲ್ಲೆಡೆ ಹೆಸರುವಾಸಿಯಾದರು.

ಗಾಂಧೀಜಿಯವರ ಅಸಹಕಾರ ಚಳವಳಿಯನ್ನು ಬೆಂಬಲಿಸಿದ ಪಟೇಲ್ 3 ಲಕ್ಷ ಕಾರ್ಯಕರ್ತರ ಪಡೆಯನ್ನು ಸಿದ್ಧಗೊಳಿಸಿ 1.5 ಮಿಲಿಯನ್ ಹಣವನ್ನು ಸಂಗ್ರಹಿಸಿದರು. ವಿದೇಶಿ ವಸ್ತುಗಳನ್ನು ತ್ಯಜಿಸುವಂತೆ ಕರೆ ನೀಡಿ ತಾವು ಸ್ವತಃ ಖಾದಿ ಬಟ್ಟೆಗೆ ಮಾರು ಹೋದರು.

1923ರಲ್ಲಿ ಗಾಂಧೀಜಿಯವರು ಕಾರಾಗೃಹದಲ್ಲಿದ್ದಾಗ ನಾಗ್‌ಪುರದಲ್ಲಿ ನಡೆಯುವ ಸತ್ಯಾಗ್ರಹದ ಮುಖಂಡತ್ವವನ್ನು ವಹಿಸುವಂತೆ ಕಾಂಗ್ರೆಸ್ ಸದಸ್ಯರು ಮನವಿ ಮಾಡಿದರು. ಸಾವಿರಾರು ಬೆಂಬಲಿಗರ ಪಡೆಯನ್ನು ರಚಿಸಿ ಹೋರಾಟಕ್ಕಿಳಿದ ವಲ್ಲಭಭಾಯಿ ಪಟೇಲ್ ಬ್ರಿಟಿಷರ ನಿದ್ದೆಗೆಡಿಸಿದರು.

1937ರಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್‌ರನ್ನು ಸಂಸದೀಯ ಉಪಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆ ಅವರ ಮೇಲೆ ಬಿದ್ದಿತು. ಸರ್ದಾರ್ ಪಟೇಲ್‌ರ ಶ್ರಮ ಹಾಗೂ ದೂರದೃಷ್ಟಿಯಿಂದಾಗಿ ಕಾಂಗ್ರೆಸ್ ಬಲಿಷ್ಠವಾಗುತ್ತಾ ಸಾಗಿತು.

1942ರ ಅಗಸ್ಟ್ 8 ರಂದು 'ಕ್ವಿಟ್ ಇಂಡಿಯಾ' ಮಸೂದೆಯನ್ನು ಜಾರಿಗೊಳಿಸಲಾಯಿತು. ಈ ಹೋರಾಟದಲ್ಲಿ ಬ್ರಿಟನ್ ಸರಕಾರವು ಸರ್ದಾರ್ ಪಟೇಲ್, ಜವಾಹರ್ ಲಾಲ್ ನೆಹರು, ಗಾಂಧೀಜಿ ಮತ್ತಿತರ ಕಾಂಗ್ರೆಸ್ ನಾಯಕರನ್ನು ಬಂಧಿಸಿತು.

1946ರ ಮಾರ್ಚ್ 23ರಂದು ಬ್ರಿಟನ್‌ನ ಲೇಬರ್ ಪಕ್ಷದ ಪ್ರಧಾನ ಮಂತ್ರಿ ಭಾರತಕ್ಕೆ ಭೇಟಿ ನೀಡಿ ಭಾರತಕ್ಕೆ ಸ್ವಾತಂತ್ರ್ಯ ನೀಡುವ ಭರವಸೆಯನ್ನು ನೀಡಿದರು. ಮಧ್ಯಂತರ ಸರಕಾರ ರಚಿಸಲು ಚುನಾವಣೆಗಳು ನಡೆದು ಕಾಂಗ್ರೆಸ್ ಪರಿಪೂರ್ಣ ಬಹುಮತ ಪಡೆದು ಜವಾಹರಲಾಲ್ ನೆಹರು ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಗೃಹ ಹಾಗೂ ವಾರ್ತಾ ಮತ್ತು ಮಾಹಿತಿ ಖಾತೆ ಸಚಿವರಾಗಿ ಪಟೇಲ್ ಕಾರ್ಯನಿರ್ವಹಿಸಿದರು. ಪಾಕಿಸ್ತಾನವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಘೋಷಿಸಿದ ನಂತರ ಅಗಸ್ಟ್ 15, 1947 ರಂದು ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ದೊರೆಯಿತು.

ಸರ್ದಾರ್ ಪಟೇಲ್‌ ಗೃಹ ಹಾಗೂ ವಾರ್ತಾ - ಮಾಹಿತಿ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಕೋಮುವಾದಿಗಳು ಹಾಗೂ ದೇಶದ್ರೋಹಿಗಳು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದಾಗ ನಿರ್ದಾಕ್ಷಿಣ್ಯವಾಗಿ ಬಂಧಿಸಿ ಸೆರೆಮನೆಗೆ ಅಟ್ಟಿದರು. ಹತ್ತು ಸಾವಿರ ಸಂಖ್ಯೆಯಲ್ಲಿರುವ ಮುಸ್ಲಿಮರು ದೆಹಲಿಯ ಕೆಂಪು ಕೋಟೆಗೆ ಮುತ್ತಿಗೆ ಹಾಕಿದಾಗ ಸೇನೆಯನ್ನು ಬಳಸಿ ದೊಂಬಿಯನ್ನು ಹತ್ತಿಕ್ಕಿದರು. ಭಾರತ ಗಣರಾಜ್ಯಕ್ಕೆ ಸೇರ್ಪಡೆಯಾಗಲು ಹೈದ್ರಾಬಾದ್ ನಿಜಾಮ ನಿರಾಕರಿಸಿದ ಹಿನ್ನೆಲೆಯಲ್ಲಿ ಹೈದ್ರಾಬಾದ್‌ಗೆ ಸೇನೆಯನ್ನು ನುಗ್ಗಿಸಿ ಒಂದೇ ರಾತ್ರಿಯಲ್ಲಿ ಯಾವುದೇ ಹಿಂಸಾಚಾರವಿಲ್ಲದೇ ನಿಜಾಮರು ಶರಣಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.

ರಾಷ್ಟ್ರ ನಿರ್ಮಾಣಕ್ಕಾಗಿ ಭಾರತೀಯ ಅಡಳಿತಾತ್ಮಕ ಸೇವೆ ಹಾಗೂ ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರ ಸೇವೆಗಳನ್ನು ಆರಂಭಿಸಿ ಉಕ್ಕಿನ ಮನುಷ್ಯರೆಂದು ಖ್ಯಾತಿಪಡೆದ ಸರ್ದಾರ್ ವಲ್ಲಭಭಾಯಿ ಪಟೇಲರು 1950ರಲ್ಲಿ ನಿಧನ ಹೊಂದಿದರು. ಆದರೆ ಅವರ ಧೈರ್ಯ ಸಾಹಸಗಳು ಜನಮಾನಸದಲ್ಲಿ ಇನ್ನೂ ಚಿರಸ್ಥಾಯಿಯಾಗಿ ಉಳಿದಿದೆ.

Share this Story:

Follow Webdunia kannada