ಅಕ್ಟೋಬರ್ 17 ರಾತ್ರಿ 11.30ಕ್ಕೆ ತಲಕಾವೇರಿ ತೀರ್ಥೋದ್ಭವ
ಚಿತ್ರ, ಲೇಖನ: ಬಿ.ಎಂ.ಲವಕುಮಾರ್
ಅಕ್ಟೋಬರ್ ಬಂತೆಂದರೆ ಕೊಡಗಿನ ಜನರಲ್ಲಿ ಅದೇನೋ ಒಂದು ರೀತಿಯ ಸಂಭ್ರಮ, ಕಾತರ ಮನೆ ಮಾಡಿಬಿಡುತ್ತದೆ. ಕಳೆದ ನಾಲ್ಕೈದು ತಿಂಗಳಿನಿಂದ ಮಳೆ, ಗಾಳಿ, ಚಳಿಯ ಮುಸುಕಿನಲ್ಲಿದ್ದವರು ಅದನ್ನೆಲ್ಲಾ ಕೊಡವಿಕೊಂಡು ಮೇಲೆದ್ದು ಬಿಡುತ್ತಾರೆ. ತಾಯಿ ಕಾವೇರಿ ಮಾತೆಯ ದಿವ್ಯ ದರ್ಶನಕ್ಕಾಗಿ ಹಾತೊರೆಯುತ್ತಾರೆ...ಕರ್ನಾಟಕದ ಸಿರಿದೇವಿ... ತಮಿಳುನಾಡಿನ ಭಾಗ್ಯಲಕ್ಷ್ಮಿ... ಕೊಡಗಿನ ಕುಲದೇವಿಯಾದ ಮಾತೆ ಕಾವೇರಿ ವರ್ಷಕ್ಕೊಮ್ಮೆ ತುಲಾ ಸಂಕ್ರಮಣದಂದು ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಆವಿರ್ಭವಿಸಿ ಭಕ್ತರಿಗೆ ದರ್ಶನ ನೀಡುತ್ತಾಳೆ. ಈ ಬಾರಿ ಅಕ್ಟೋಬರ್ 17ರಂದು ರಾತ್ರಿ 11.30ಕ್ಕೆ ಮಿಥುನ ಪುಣ್ಯ ಲಗ್ನದಲ್ಲಿ ಮಾತೆ ಕಾವೇರಿಯ ದರ್ಶನ ಭಾಗ್ಯ ಭಕ್ತರಿಗೆ ಲಭಿಸಲಿದೆ.