Select Your Language

Notifications

webdunia
webdunia
webdunia
webdunia

ರಾವಣನ ಅಹಂಕಾರ ಭಂಗ

ರಾವಣನ ಅಹಂಕಾರ ಭಂಗ
, ಶುಕ್ರವಾರ, 21 ಆಗಸ್ಟ್ 2009 (18:35 IST)
ಒಂದು ದಿನ ರಾಕ್ಷಸ ರಾವಣ ಘೋರವಾದ ತಪಸ್ಸೊಂದನ್ನು ಕೈಗೊಂಡನು. ಆತನ ತಪಸ್ಸಿಗೆ ಮೆಚ್ಚಿ, ಶಿವ ಪ್ರತ್ಯಕ್ಷನಾದನು. ರಾವಣ ತನ್ನ ಇಷ್ಟದೇವನಲ್ಲಿ ತಾನು ಮತ್ತು ತನ್ನ ಸಾಮ್ರಾಜ್ಯ ಎಂದಿಗೂ ತೊಂದರೆಗೊಳಗಾಗಬಾರದು ಅಥವಾ ನಾಶವಾಗಬಾರದು ಎಂಬ ವರವನ್ನು ಭಿನ್ನವಿಸಿದನು. ಪ್ರತಿಫಲವಾಗಿ, ಶಿವ ಆತನಿಗೆ ತಥಾಸ್ತು ಎಂದು, ತನ್ನ ಮುದ್ರೆ ಇರುವ ಶಿವಲಿಂಗವನ್ನು ನೀಡಿದನು; ಮತ್ತು ರಾವಣ ಅದನ್ನು ತನ್ನರಾಜ್ಯಕ್ಕೆ ಕೊಂಡೊಯ್ದು ಅರ್ಹವಾದ ವಿಧಿವತ್ತಾದ ನಡವಳಿಕೆಯ ನಂತರ ದೇವಸ್ಥಾನದಲ್ಲಿ ಸ್ಥಾಪಿಸಬೇಕು ಎಂದು ಆಜ್ಞಾಪಿಸಿದನು.

ನಂತರ, ರಾವಣನನ್ನು ಯಾರಿಂದಲೂ ಸೋಲಿಸಲು ಅಸಾಧ್ಯವಾಗತೊಡಗಿತು. ಶಿವಲಿಂಗ ನೀಡುವ ವೇಳೆಗೆ ಶಿವ ಷರತ್ತೊಂದನ್ನು ವಿಧಿಸಿದ್ದನು. ಯಾವುದೇ ಕಾಲದಲ್ಲೂ ಏನೇ ಕಷ್ಟ ಬಂದರೂ ಶಿವಲಿಂಗವನ್ನು ನೆಲದ ಮೇಲೆ ಇಡಬಾರದು, ಒಂದು ವೇಳೆ ನೆಲದ ಮೇಲೆ ಇರಿಸಿದನೆಂದಾದಲ್ಲಿ, ಆತ ಪಡೆದ ವರ ಫಲಿಸದು ಎಂಬುದು ಆ ಷರತ್ತು. ಶಿವನ ಅನುಗ್ರಹಕ್ಕೀಡಾದ ರಾವಣ ಸಂತೋಷದಿಂದ ಲಿಂಗವನ್ನು ಪೂಜಿಸುತ್ತಾ ತಾನೇ ಈ ಲೋಕಕ್ಕೆ ಒಡೆಯನೆಂಬಂತೆ ಮದದಿಂದ ವರ್ತಿಸಲಾರಂಭಿಸಿದನು. ರಾವಣನ ಈ ಆಟೋಪದಿಂದ ದೇವತೆಗಳೆಲ್ಲ ಭಯಭೀತರಾದರು, ತಮ್ಮ ಕಷ್ಟಗಳ ನಿವಾರಣೆ ಶಿವನ ಸುತನಾದ ಗಣಪತಿಗೆ ಮಾತ್ರ ಸಾಧ್ಯ ಎಂದು ಮನಗಂಡು ಆತನ ಬಳಿಗೆ ತೆರಳಿದರು. ಗಣಪತಿ ದೇವತೆಗಳ ಕಷ್ಟಗಳನ್ನೆಲ್ಲ ಆಲಿಸಿ, ಅದಕ್ಕೆ ಪರಿಹಾರವನ್ನು ಸೂಚಿಸುವುದಾಗಿ ದೇವತೆಗಳಿಗೆ ಅಭಯ ನೀಡಿದ. ದೇವತೆಗಳು ತೆರಳಿದ ಬಳಿಕ ಗಣಪತಿಯು ರಾವಣನ ಅಹಂಕಾರ ಮುರಿಯುವ ಬಗ್ಗೆ ಯೋಚಿಸಿದ.

ಹೀಗಿರಲು ಒಂದು ದಿನ, ಶಿವ ಭಕ್ತನಾದ ರಾವಣನು ತನ್ನ ನಿತ್ಯವಿಧಿಯಂತೆ ಸಂಧ್ಯಾ ವಂದನೆಗೆಂದು ಸರೋವರದ ಬಳಿಗೆ ನಡೆದನು. ಆದರೆ ಸ್ನಾನಕ್ಕೆ ಹೋಗುವಾಗ ಶಿವಲಿಂಗವನ್ನು ನೆಲದ ಮೇಲೆ ಇರಿಸುವಂತಿರಲಿಲ್ಲ. ಶಿವನ ಷರತ್ತನ್ನು ಮೀರಿ ನಡೆದರೆ ತಾನು ಪಡೆದುಕೊಂಡ ವರ ಫಲಿಸದೆ ಹೋದೀತು ಅನ್ನುವ ಅರಿವು ರಾವಣನಲ್ಲಿತ್ತು, ದಾರಿ ಕಾಣದಾಗಿ ಏನು ಮಾಡುವುದೆಂದು ಯೋಚಿಸುತ್ತಿರುವಾಗ ದೂರದಲ್ಲಿ ಓರ್ವ ಬ್ರಾಹ್ಮಣ ಬಾಲಕ ಬರುತ್ತಿರುವುದು ಕಾಣಿಸಿತು, ಹತ್ತಿರಕ್ಕೆ ಬಂದಂತಹ ಆ ಬ್ರಾಹ್ಮಣ ಬಾಲಕನಲ್ಲಿ ರಾವಣ ತಾನು ಸ್ನಾನ ಮಾಡಿ ಬರುವವರೆಗೆ ಶಿವಲಿಂಗವನ್ನು ಕೈಯಲ್ಲೇ ಹಿಡಿದುಕೊಳ್ಳುವಂತೆ ಕೇಳಿಕೊಂಡನು. ಒಪ್ಪಿದ ಬಾಲಕನ ಕೈಯಲ್ಲಿ ರಾವಣ ಶಿವಲಿಂಗವನ್ನು ಒಪ್ಪಿಸಿದ.

ಲಿಂಗದ ಜವಬ್ದಾರಿಯನ್ನು ಹೊತ್ತ ಬ್ರಾಹ್ಮಣ ಹುಡುಗ ಅದರ ಭಾರವನ್ನು ತಾಳಲಾರದೆ ಸಹಾಯಕ್ಕಾಗಿ ರಾವಣನನ್ನು ಮೂರು ಭಾರಿ ಕೂಗಿದ. ಪ್ರತ್ಯುತ್ತರ ಬಾರದಿದ್ದಾಗ ಲಿಂಗವನ್ನು ಆತ ನೆಲದ ಮೇಲೆ ಇಟ್ಟು ಬಿಟ್ಟ.

ರಾವಣ ಹಿಂತಿರಗಿ ಬಂದು ನೋಡಿದಾಗ, ಶಿವಲಿಂಗ ನೆಲದ ಮೇಲೆ ಇರುವುದನ್ನು ಕಂಡು ಬಹಳ ಆಕ್ರೋಶಗೊಂಡನು, ಕೋಪಗೊಂಡ ಆತ ಬಾಲಕನಿಗೆ ಹೊಡೆಯಲು ಮುಂದಾದಾಗ, ಆ ಬಾಲಕ ತನ್ನ ನಿಜ ರೂಪವನ್ನು ರಾವಣನಿಗೆ ತೋರಿದನು, ಆದರೆ ಆ ಬ್ರಾಹ್ಮಣ ಹುಡುಗ ಬೇರಾರು ಅಲ್ಲ, ಶಿವಸುತ ಗಣಪತಿಯೇ ಆಗಿದ್ದ. ಸುರಲೋಕದಲ್ಲಿ ದೇವತೆಗಳು ಅನುಭವಿಸುತ್ತಿದ್ದ ಸಂಕಷ್ಟಗಳನ್ನು ದೂರಮಾಡಿ ಅವರುಗಳ ಅಭೀಷ್ಟವನ್ನು ಈಡೇರಿಸುವುದಕ್ಕಾಗಿ ತಾನು ಹೀಗೆ ಮಾಡಿದೆನೆಂದು ಗಣಪತಿ ಹೇಳಿದಾಗ ರಾವಣನಿಗೆ ತನ್ನ ತಪ್ಪಿನ ಅರಿವಾಯಿತು. ತಪ್ಪಿನ ಬಗ್ಗೆ ಗಣೇಶನಲ್ಲಿ ಕ್ಷಮೆಯಾಚಿಸಿದ ರಾವಣ ದುಃಖದಿಂದ ಕಲ್ಲನ್ನು ಮೇಲೆತ್ತಲು ಶಕ್ತಿಮೀರಿ ಪ್ರಯತ್ನಿಸಿದ. ಆದರೆ ಆತನ ಯತ್ನ ಫಲಿಸಲಿಲ್ಲ.
ಬದಲಾಗಿ ಆತ ಲಿಂಗವನ್ನು ಬಲವಾಗಿ ಎಳೆದ ಕಾರಣ ಲಿಂಗದ ಎರಡೂ ಬದಿಯೂ ಗೋವಿನ ಕಿವಿಯ ಆಕಾರವನ್ನು ಪಡೆಯಿತು, ಮತ್ತು ಮುಂದೆ ಆ ಕ್ಷೇತ್ರವು ಗೋಕರ್ಣ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. ಹೀಗೆ ಗಣಪತಿಯ ಕಾರುಣ್ಯದಿಂದ ಸ್ಥಾಪನೆಯಾದ ಈ ಪ್ರದೇಶವು ಇದೀಗ ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿದ್ದು, ಸಾವಿರಾರು ಯಾತ್ರಾರ್ಥಿಗಳ ಪುಣ್ಯಕ್ಷೇತ್ರವಾಗಿ ಕಂಗೊಳಿಸುತ್ತಿದೆ.

ಎಲ್ಲಾ ದಾನವರ ಅಂತ್ಯ ಕೊನೆಯಲ್ಲಿ ಇದ್ದೇ ಇರುತ್ತದೆ. ಯಾವ ದಾನವರು ತಾವೇ ಶ್ರೇಷ್ಠ ಎಂದುಕೊಂಡು ಮದದಿಂದ ವರ್ತಿಸುತ್ತಾರೋ ಆ ಕ್ಷಣದಿಂದ ಅಂತಹವರು ತಮ್ಮ ಪ್ರಾಣಕ್ಕೆ ಅಂತ್ಯವನ್ನು ಕಂಡುಕೊಂಡಂತೆ ಎಂಬುದನ್ನು ಈ ಕಥೆಯಿಂದ ತಿಳಿದುಕೊಳ್ಳಬಹುದುಕೊಳ್ಳಬಹುದಾಗಿದೆ.

Share this Story:

Follow Webdunia kannada