Select Your Language

Notifications

webdunia
webdunia
webdunia
webdunia

ಗಣೇಶೋತ್ಸವಗಳು ಬಿಂದಾಸ್ ಆಗದಿರಲಿ

ಗಣೇಶೋತ್ಸವಗಳು ಬಿಂದಾಸ್ ಆಗದಿರಲಿ
ದೀಪಕ್ ಮಧ್ಯಸ್ಥ

ವರ್ಷಂಪ್ರತಿ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನ ವಿನಾಯಕ ಚತುರ್ಥಿಯನ್ನು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬಂತೆ ಸಿಹಿ ತಿಂಡಿಯನ್ನು ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ. ದಿನಕಳೆದಂತೆ, ಕಾಲ ಬದಲಾಗಿರುವಂತೆ ಹಬ್ಬಾಚರಣೆಯಲ್ಲಿಯೂ ಬದಲಾವಣೆಯಾಗುತ್ತಿದೆ.

ಉಳಿದ ಹಬ್ಬಗಳಂತಲ್ಲ ಗಣೇಶ ಚತುರ್ಥಿ ಆಚರಣೆ. ಮನೆಮನೆಗಳಲ್ಲಿ ಮಾತ್ರವಲ್ಲದೆ, ಸಮಾಜ ಬಾಂಧವರು ಸೇರಿ ಒಂದೆಡೆ ಕಲೆತು ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತದೆ. ಈ ರೀತಿಯ ಹಬ್ಬಾಚರಣೆಯ ಹಿಂದೆ ಲೋಕಮಾನ್ಯ ಬಾಲಗಂಗಾಧರ ತಿಲಕರ ಪರಿಶ್ರಮವಿದೆ. ಏಕೆಂದರೆ ಅವರು ಸ್ವಾತಂತ್ರ್ಯ ಚಳುವಳಿಗೊಸ್ಕರ ಜನರನ್ನು ಒಗ್ಗೂಡಿಸಲು ಚೌತಿ ಮತ್ತು ಶಿವಾಜಿ ಜಯಂತಿಯನ್ನು ಸಾಮೂಹಿಕವಾಗಿ ಆಚರಿಸುವ ಪರಿಕಲ್ಪನೆಯನ್ನು ಹುಟ್ಟುಹಾಕಿದರು.

WD
ಭಾರತದಲ್ಲಿ ಆಚರಿಸುವ ಉಳಿದೆಲ್ಲ ಹಬ್ಬಗಳಿಗಿಂತ ಗಣೇಶ ಚತುರ್ಥಿ ಸ್ವಲ್ಪ ಭಿನ್ನ. ಏಕೆಂದರೆ ಉಳಿದೆಲ್ಲ ಹಬ್ಬಗಳಿಗಿರುವಷ್ಟು ನಿಯಮ-ನಿಷ್ಠೆಗಳನ್ನು ಮೋದಕ ಪ್ರಿಯನ ಹಬ್ಬಕ್ಕೆ ಸ್ವಲ್ಪ ಸಡಿಲಿಸಲಾಗಿದೆ. ದೇವರುಗಳಿಲ್ಲಿ ಗಣೇಶ ಸ್ವಲ್ಪ ಯುವಕ ಎನ್ನುವುದು ಕಾರಣವಿರಬಹುದೇ? ನನಗೆ ಗೊತ್ತಿಲ್ಲ.

ಸಂಗೀತ, ಬಾಜಾಬಜಂತ್ರಿಯೊಂದಿಗೆ, ಶಾಲಾ ಮಕ್ಕಳು, ಸಾರ್ವಜನಿಕರು ಭಕ್ತಿ-ಭಾವದಿಂದ ಸಾರ್ವಜನಿಕ ಗಣೇಶೋತ್ಸವಕ್ಕಾಗಿ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪನೆಗಾಗಿ ತರುವಾಗ ತುಂಬ ಸಂಭ್ರಮ. ಮೂರ್ತಿಯನ್ನು ತಂದ ನಂತರ ಗಣೇಶನಿಗೆ ಪ್ರತಿಸ್ಠಾಪನೆ, ಪೂಜೆ-ಪುನಸ್ಕಾರ ಇತ್ಯಾದಿ ಇತ್ಯಾದಿ. ನಂತರ ಸಂಜೆಯ ವೇಳಗೆ ಮತ್ತೆ ಬಿಂದಾಸ್ ಹಾದಿಗೆ ಬರುತ್ತದೆ ನಮ್ಮ ಗಣೇಶ ಚತುರ್ಥಿ.

ಮೊದಲೆಲ್ಲ ಪೌರಾಣಿಕ ನಾಟಕ ಪ್ರದರ್ಶನ, ಜಾನಪದ ನೃತ್ಯ, ಭಕ್ತಿ ಗೀತೆ, ಭಾವಗೀತೆಗಳಿದ್ದು ಸಭಿಕರು ಭಕ್ತಿ-ಭಾವದಿಂದ ಕಾರ್ಯಕ್ರಮ ನೋಡಿ ಕಾರ್ಯಕ್ರಮ ಆನಂದಿಸಿದರೆ ಈಗ ಅವುಗಳ ಸ್ಥಾನವನ್ನು ಬ್ರೇಕ್ ಡಾನ್ಸ್, ಫಿಲಂ ಡಾನ್ಸ್, ಚಿತ್ರಗೀತೆ, ಆರ್ಕೆಸ್ಟ್ರಾಗಳು ಕಬಳಿಸಿವೆ. ಈ ಕಾರ್ಯಕ್ರಮಗಳನ್ನು ನೋಡಿ ಜನರು ಹುಚ್ಚೆದ್ದು ಕುಣಿದು ಆನಂದಿಸುತ್ತಾರೆ. ಎರಡೂ ಕಾರ್ಯಕ್ರಮಗಳು ಆನಂದ ನೀಡುತ್ತದೆ ಸತ್ಯ. ಆದರೆ ಎಲ್ಲಿದೆ ನಮ್ಮ ಸಂಪ್ರದಾಯ? ಮತ್ತೆ ಯೋಚಿಸಿ, ಈಗ ಮುಂದೆ ಓದಿ.

ನಿಯಮಿತ ದಿನಗಳ ಕಾಲ ಪೂಜೆ ಪುನಸ್ಕಾರ, ಗೌಜಿ ಗದ್ದಲಗಳೆಲ್ಲ ಮುಗಿದ ನಂತರ, ಗಣೇಶ ಮೂರ್ತಿಯ ವಿಸರ್ಜನೆ ಕಾಲಕ್ಕೆ ಮತ್ತೆ ಮೆರವಣೆಗೆ ಡೋಲು ಕುಣಿತ ಅಥವಾ ಸೌಂಡ್ ಬಾಕ್ಸ್‌ನಲ್ಲಿ ಕಿವಿಗಢಚಿಕ್ಕುವ ಹಾಡು, ಪಟಾಕಿ ಸುಡುಮದ್ದುಗಳ ಘರ್ಜನೆ, ಈ ಸದ್ದಿನ ನಡುವೆ ಯಾರು ಏನು ಹೇಳುತ್ತಾರೆಂಬುದೇ ಕೇಳದಿರುವ ಸ್ಥಿತಿ!

ಈ ಮೆರವಣೆಗೆಯ ಮುಂದೆ ಗೊತ್ತುಗುರಿ ಇಲ್ಲದೆ ಹೆಜ್ಜೆ ಹಾಕುವ ನಮ್ಮ ಯುವಕಶಕ್ತಿ. ಏಕೆ 'ಯುವಕಶಕ್ತಿ' ಎಂಬ ಪದಪ್ರಯೋದವೆಂದರೆ, ಯುವತಿಯರು ಇದಕ್ಕಾಗಿ ತುದಿಗಾಲಲ್ಲಿದ್ದರೂ, ಹೆತ್ತವರ ಪರವಾನಿಗೆ ದೊರೆತ್ತಿಲ್ಲ ಅಷ್ಟೇ. ಹೀಗೆ ಮೆರವಣಿಗೆ ಸಾಗಿ ಯಾವುದಾದರೂ ಶುದ್ಧ ನೀರಿನ ಮೂಲದಲ್ಲಿ ಗಣೇಶನ ಮುಳುಗಡೆ. ಕೆಲವರ ಮನೆಯಲ್ಲಿ ಅಲ್ಲಿಗೆ ಆ ವರ್ಷದ ಗಣೇಶ ಚೌತಿ ಮಕ್ತಾಯ ಮುಂದಿನ ಚೌತಿಯ ನಿರೀಕ್ಷೆ, ಇನ್ನು ಕೆಲವರ ಮನೆಯಲ್ಲಿ ಮರು ದಿನವು ಹಬ್ಬದ ಹಳಸಲು ಮುಂದುವರಿಯವ ಸಾಧ್ಯತೆ.

ಇನ್ನೂ ಏಕದಂತನ ಹಬ್ಬವನ್ನು ಆರ್ಥಿಕ ದೃಷ್ಟಿಯಲ್ಲಿ ನೋಡಿದಾಗ, ಭಾರತದಲ್ಲಿ ಆಚರಿಸುವ ಉಳಿದೆಲ್ಲ ಹಬ್ಬಗಳಿಗಿಂತ ಈ ಗಣೇಶ ಚತುರ್ಥಿ ಅರ್ಥ ವ್ಯೆವಸ್ಥೆಯನ್ನು ಚುರುಕುಗೊಳಿಸಿ ಒಂದು ಆರ್ಥಿಕ ಸಂಚಲನ ಮೂಡಿಸುತ್ತದೆ. ಹಬ್ಬದ ಸಂದರ್ಭದಲ್ಲಿ ಹಣದ ಹರಿವಿನ ವೇಗ(velocity) ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತದೆ. ಒಟ್ಟಾಗಿ ಹೇಳುವುದಾದರೆ ಗಣೇಶ ಚತುರ್ಥಿ ಹಬ್ಬಕ್ಕೆ ಗಣೇಶ ಚತುರ್ಥಿಯೆ ಸಾಟಿ! ಮತ್ತೆ ಬೇರಾವ ಹಬ್ಬಗಳೂ ಇದನ್ನು ಹಿಂದಿಕ್ಕಲು ಸಾಧ್ಯವಿಲ್ಲ.

Share this Story:

Follow Webdunia kannada