Webdunia - Bharat's app for daily news and videos

Install App

ಎಳ್ಳು ಬೆಲ್ಲವ ಬೀರಿ ಒಳ್ಳೆಯ ಮಾತನಾಡಿ...

Webdunia
ಅವಿನಾಶ್ ಬಿ.
WD
ಗಡಗಡ ನಡುಗಿಸುವ ಚಳಿಯು ದೂರವಾಗಿ, ವಸಂತನ ಆಗಮನವಾಗುತ್ತಲೇ, ಪ್ರಕೃತಿ ದೇವಿಯ ಕಣ್ಣಲ್ಲಿ ಹೊಸ ಕಳೆ, ಹೊಸ ಹೊಳಹು. ಗಿಡಮರಗಳೆಲ್ಲಾ ಹೂಬಿಟ್ಟು ತನ್ನನ್ನು ನೆಚ್ಚಿಕೊಂಡಿರುವ ಸಮಸ್ತ ಜೀವರಾಶಿಗೆ ಫಲ-ಪುಷ್ಪಗಳೊಂದಿಗೆ ಪೋಷಣೆ ನೀಡುವ ಕಾಯಕಕ್ಕೆ ಅಡಿಯಿಡುವ, ಹಚ್ಚ ಹಸಿರಿನೊಂದಿಗೆ ದಷ್ಟಪುಷ್ಟಗೊಳ್ಳುವ ಪ್ರಕೃತಿದೇವಿಯನ್ನು ಆದರಿಸುವ ಸಂಕ್ರಾಂತಿಯ ಸಡಗರವಿದು. ಹೊಸ ವರ್ಷದ ಆಚರಣೆಯ ನಂತರ ದೇಶವು ಸಂಭ್ರಮ ಪಡುವ ಸುಗ್ಗಿಯ ಪರ್ವವೇ ಈ ಮಕರ ಸಂಕ್ರಮಣ. ಭೂಮಿಯನ್ನು ಹಸನಾಗಿಸಿ ನಮ್ಮ ಜೀವನವನ್ನೂ ಹಸನಾಗಿಸುವ ಪ್ರಕೃತಿ ಮಾತೆಗೆ ನಮಿಸಿ ಸಂಭ್ರಮಿಸುವ ಪರ್ವವಿದು. ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಹೊಸ ಬಟ್ಟೆಯುಟ್ಟು, ಮೈಮನಗಳ ಕೊಳೆ ನಿವಾರಿಸಿಕೊಳ್ಳುವ ಸಂಕೇತವೂ ಅಹುದು.

ವಾಸ್ತವಿಕವಾಗಿ, ಸೂರ್ಯನ ಚಲನೆಯ ಆಧಾರದಲ್ಲಿರುವ ಮೇಷ-ಮೀನಾದಿ ತಿಂಗಳುಗಳನ್ನು ಸೂರ್ಯನು ಯಾವ ರಾಶಿಗೆ ಪ್ರವೇಶಿಸುತ್ತಾನೆ ಎಂಬುದರ ಆಧಾರದಲ್ಲಿ ಗುರುತಿಸಲಾಗುತ್ತದೆಯಾದರೂ, ಸೂರ್ಯನು ಮಕರ ರಾಶಿಗೆ ಕಾಲಿಡುವ ದಿನಕ್ಕೆ ಅದೇನೋ ವಿಶೇಷತೆ, ಸಡಗರ, ಸಂಭ್ರಮ. ಇತರ 11 ರಾಶಿಗಳಿಗೂ ಸೂರ್ಯ ಪ್ರವೇಶಿಸುತ್ತಾನೆ. ಹೀಗಿರುವಾಗ ಧನುವಿನ ಮನೆಯನ್ನು ತೊರೆದು ಆತನ ಮಕರ ರಾಶಿ ಪ್ರವೇಶವೇ ವಿಶೇಷವಾಗುವುದೇಕೆ ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ. ಇದು ಮುಂಬರುವ ಪ್ರಖರ ಬೆಳಕಿನ ಬೆಚ್ಚಗಿನ ವಾತಾವರಣದ ಆರಂಭಕ್ಕೆ ಮುನ್ನುಡಿಯಿಡುವ ದಿನ. ನಮಗೆ ಹೆಚ್ಚು ಸಮಯ ದೊರೆಯುತ್ತದೆ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಬ ಸಂದೇಶದೊಡನೆ ಅಂದಿನಿಂದ ಹಗಲು ದೀರ್ಘವಾಗುತ್ತದೆ.

ತಂದೆ-ಮಕ್ಕಳ ಬಂಧದ ಕುರುಹು
WD
ಪುರಾಣಗಳನ್ನು ಓದುತ್ತಾ ಹೋದರೆ, ಸೂರ್ಯನಿಗೆ ಛಾಯಾ ದೇವಿಯ ಗರ್ಭದಲ್ಲಿ ಜನಿಸಿದ ಮಗ ಶನಿ. ಶನಿ ಮತ್ತು ಸೂರ್ಯ ಇಬ್ಬರ ಗುಣಗಳು ತದ್ವಿರುದ್ಧವಾದರೂ, ಸೂರ್ಯನು ವರ್ಷಕ್ಕೊಂದು ಬಾರಿ ತನ್ನ ಪುತ್ರನಾದ ಶನಿಯ ಮನೆಯಾಗಿರುವ ಮಕರ ರಾಶಿಗೆ ಬಂದೇ ಬರುತ್ತಾನೆ. ಒಂದು ರೀತಿಯಲ್ಲಿ ತಂದೆ-ಮಕ್ಕಳ ಬಾಂಧವ್ಯದ ಸಂಕೇತವಾಗಿಯೂ ಭಕ್ತಿಯ ಸಂಕೇತವಾಗಿಯೂ ಮಕರ ಸಂಕ್ರಾಂತಿಯು ಮಾನವ ಜೀವನದ ಬಾಂಧವ್ಯದ ಬೆಸುಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ನಾಲ್ಕು ದಿನಗಳ ಸಂಕ್ರಾಂತಿ ಸಡಗರ
WD
ಸಂಕ್ರಾಂತಿ ಎಂದ ತಕ್ಷಣ ಕರ್ನಾಟಕದಲ್ಲಿ ನೆನಪಿಗೆ ಬರುವುದು ಎಳ್ಳು-ಬೆಲ್ಲ ಮತ್ತು ಕಬ್ಬು. ವಾಸ್ತವದಲ್ಲಿ ಮಕರ ಸಂಕ್ರಮಣ ಹಬ್ಬವು ನಾಲ್ಕು ದಿನಗಳ ಪರ್ಯಂತ ನಡೆಯುತ್ತದೆ. ಭೋಗಿ ಹಬ್ಬ, ಪೊಂಗಲ್, ಮಾಟ್ಟು ಪೊಂಗಲ್ ಮತ್ತು ಕೊನೆಯ ದಿನ ಕಾಣುಂ ಪೊಂಗಲ್. ಇದರ ಆಚರಣೆ ಭಿನ್ನವಾಗಿರುತ್ತದೆ.

ಮೊದಲನೆಯ ದಿನ ಭೋಗಿ ಹಬ್ಬ, ಅಂದು ಮನೆ-ಮನಸಿನ ಕತ್ತಲು-ಕಲ್ಮಶ ತೊಳೆಯುವ ದಿನ. ಮನೆಯನ್ನು ಶುಭ್ರವಾಗಿಸಿ, ಮನಸ್ಸನ್ನೂ ಶುಚಿಗೊಳಿಸಿ, ಇಳೆಯಲ್ಲಿ ಬೆಳೆಯ ಸಮೃದ್ಧಿಗೆ ಮಳೆ ಸುರಿಸುವ ಹೊಣೆ ಹೊತ್ತಿರುವ ಇಂದ್ರನಿಗೆ ನಮಿಸುವ ದಿನ. ಕೆಲವೆಡೆ, ಮನೆಯ ಹೊರಗೆ ಕಟ್ಟಿಗೆ-ಬೆರಣಿಯಿಂದ ಅಗ್ನಿ ರಚಿಸಿ, ಅದರಲ್ಲಿ ಬೇಡವಾದ (ಮುರಿದ ಕುರ್ಚಿ ಇತ್ಯಾದಿ ಪೀಠೋಪಕರಣ ಮತ್ತಿತರ ಹಳೆಯ, ಬೇಡವಾದ ಸಾಮಗ್ರಿ) ವಸ್ತುಗಳನ್ನು ಸುಟ್ಟುಹಾಕಿ, ಒಳ್ಳೆಯ ಅಂಶಗಳನ್ನು ಉಳಿಸಿಕೊಳ್ಳುವ ಪ್ರತೀಕವಾಗಿ ಆಚರಣೆ ನಡೆಯುತ್ತದೆ.

WD
ಎರಡನೇ ದಿನ ಪೊಂಗಲ್. ಬಾಳು ಬೆಳಗುವ ಸೂರ್ಯನ ಆರಾಧನೆಯ ದಿನ. ಮನೆಯ ಹೊರಗೆ ಒಲೆ ಹಾಕಿ ಅಕ್ಕಿ-ಹಾಲು-ಹೆಸರುಬೇಳೆ ಒಳಗೊಂಡ, ಸಿಹಿ ಪೊಂಗಲ್ (ಸಕ್ಕರೆ ಪೊಂಗಲ್) ಅಥವಾ ಹುಗ್ಗಿ ತಯಾರಿಸಿ ಸೂರ್ಯನಿಗೆ ಅರ್ಪಿಸುವುದು, ಮನೆಯೆದುರು ರಂಗವಲ್ಲಿ ಹಾಕುವುದು ಕಂಡುಬರುತ್ತದೆ. ಸುಖ ಸಮೃದ್ಧಿ, ಸದಾಶಯಗಳು ಜೀವನದಲ್ಲಿ ಉಕ್ಕಿ ಬರಲಿ ಎಂಬುದನ್ನು ಪ್ರತಿನಿಧೀಕರಿಸುವ ನಿಟ್ಟಿನಲ್ಲಿ ಈ ಸಕ್ಕರೆ ಪೊಂಗಲ್ ಅನ್ನು ಒಲೆಯಲ್ಲಿ ಉಕ್ಕಿಸಲಾಗುತ್ತದೆ. ಇದನ್ನು ಪರಸ್ಪರ ಹಂಚಿ ತಿಂದು ಸಂಭ್ರಮಿಸುವ ದಿನವೂ ಇದೇ.

ಮೂರನೇ ದಿನ ಮಾಟ್ಟುಂ ಪೊಂಗಲ್. ಅಂದರೆ ಗೋವುಗಳನ್ನು ಆರಾಧಿಸುವ ದಿನ. ಗದ್ದೆ ಉಳುಮೆಗೆ ನೆರವಾಗುವ ಎತ್ತುಗಳು, ಕೃಷಿಕನಿಗೆ ನೆರವಾಗುವ ಹಸುಗಳನ್ನು ಸಿಂಗರಿಸಿ, ಆರತಿ ಮಾಡಿ, ಕಿಚ್ಚು ಹಾಯಿಸುವ ಸಂಪ್ರದಾಯಗಳನ್ನು ಹಲವೆಡೆ ನಾವು ಕಾಣಬಹುದು.

ನಾಲ್ಕನೇ ದಿನ ಕಾಣುಂ ಪೊಂಗಲ್. ಅಂದರೆ ನೋಡುವ ಪೊಂಗಲ್ ಹಬ್ಬ ಎಂದರ್ಥ. ಮನೆ ಮನೆಗೆ ತೆರಳಿ "ಎಳ್ಳುಬೆಲ್ಲ ಬೀರಿ ಒಳ್ಳೆಯ ಮಾತನಾಡಿ" ಎಂದು ಹಾರೈಸುತ್ತಾ, ಎಳ್ಳು, ಬೆಲ್ಲ, ಸಕ್ಕರೆಯಚ್ಚು, ಕೊಬ್ಬರಿ, ಸಕ್ಕರೆಬೊಂಬೆ, ಜತೆಗೆ ಹುರಿಗಡಲೆ, ನೆಲಗಡಲೆ ಸೇರಿಸಿ, ಕಬ್ಬು ಕೂಡ ಪರಸ್ಪರ ವಿನಿಮಯ ಮಾಡುತ್ತಾ, ನೆರೆಕರೆಯ ಬಾಂಧವ್ಯ ವೃದ್ಧಿಯಾಗಿಸಿಕೊಳ್ಳುವ ಆಚರಣೆ. ಇದಕ್ಕೆ ಎಳ್ಳುಬೀರುವುದು ಎನ್ನುತ್ತಾರೆ. ಇಲ್ಲಿ ಎಳ್ಳು ಶನಿಯ ಪ್ರತೀಕ ಮತ್ತು ಬೆಲ್ಲ ಸೂರ್ಯನ ಪ್ರತೀಕ. ಶನಿ-ಸೂರ್ಯನ ಅಂದರೆ ತಂದೆ-ಮಕ್ಕಳ ಬಾಂಧವ್ಯದ ಸಂಕೇತವೂ ಹೌದು. ಆದರೆ, ಇತ್ತೀಚೆಗಿನ ಅವಸರದ ಯುಗದಲ್ಲಿ ಎಲ್ಲ ಆಚರಣೆಗಳೂ ಒಂದೇ ದಿನಕ್ಕೆ ಸೀಮಿತವಾಗುತ್ತಿರುವುದು ನಾವು ಕಾಣುತ್ತಿರುವ ಸತ್ಯ.

ವಿವಿಧತೆಯಲ್ಲಿ ಏಕತೆ
ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನ ಆಚರಣೆಯಿದೆ. ತಮಿಳುನಾಡಿನಲ್ಲಿ ಪೊಂಗಲ್ ಹಬ್ಬವೆಂದು ಕರೆಸಿಕೊಳ್ಳುವ ಇದು ಈ ವರ್ಷದಿಂದ ತಮಿಳು ಹೊಸ ವರ್ಷಾರಂಭ ದಿನವಾಗಿಯೂ ಅಧಿಕೃತವಾಗಿ ಮಾನ್ಯವಾಗಿದೆ. ಸಿಹಿ ಪೊಂಗಲ್ ಈ ದಿನದ ವಿಶೇಷ. ಕೇರಳ, ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯಾಗಿ, ಮಹಾರಾಷ್ಟ್ರದಲ್ಲಿ ತಿಲ-ಗುಳ್ (ಎಳ್ಳುಂಡೆ) ಹಬ್ಬವಾಗಿ, ಆಂಧ್ರ ಪ್ರದೇಶದಲ್ಲಿ ಪೆದ್ದ ಪಂಡುಗ (ದೊಡ್ಡ ಹಬ್ಬ), ಅಸ್ಸಾಂನಲ್ಲಿ ಭೋಗಲಿ ಬಿಹು/ಮಾಘ ಬಿಹು, ಬಿಹಾರದಲ್ಲಿ ತಿಲ ಸಂಕ್ರಾಂತಿ, ಗುಜರಾತಿನಲ್ಲಿ ಗಾಳಿಪಟ ಉತ್ಸವವನ್ನೊಳಗೊಂಡ ಉತ್ತರಾಯಣ, ಮಧ್ಯಪ್ರದೇಶದಲ್ಲಿ ಸುಕಾರತ್/ಸಕಾರತ್, ಪಂಜಾಬ್ ಮತ್ತು ಹರ್ಯಾಣದಲ್ಲಿ ಲೋಹ್ರಿ, ಉತ್ತರ ಪ್ರದೇಶದಲ್ಲಿ ಕಿಚಿಡಿ/ಕಿಚಿರಿ ಮತ್ತು ಪಶ್ಚಿಮ ಬಂಗಾಳದಲ್ಲಿ ಗಂಗಾಸಾಗರ ಮೇಳದ ಮೂಲಕ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸಲಾಗುತ್ತದೆ.

ಉತ್ತರಾಯಣ ಪುಣ್ಯಕಾಲವೇ ಇದು?
ಉತ್ತರಾಯಣ ಪುಣ್ಯಕಾಲಕ್ಕೂ ಮಕರ ಸಂಕ್ರಾಂತಿಗೂ ಸಂಬಂಧ ಕಲ್ಪಿಸಲಾಗುತ್ತದೆಯಾದರೂ, ಅದರ ಬಗೆಗಿನ್ನೂ ವಾದ-ವಿವಾದಗಳಿವೆ. ನಮ್ಮ ದೇಶದಲ್ಲಿ ಚಾಂದ್ರಮಾನ (ಚಂದ್ರನ ಚಲನೆ ಆಧರಿಸಿದ) ಮತ್ತು ಸೌರಮಾನ (ಸೂರ್ಯನ ಚಲನೆ ಆಧರಿಸಿದ) ಎರಡು ಪಂಚಾಂಗಗಳನ್ನು ಅನುಸರಿಸಲಾಗುತ್ತದೆ. ಹೆಚ್ಚಾಗಿ ಹಬ್ಬ ಹರಿದಿನಗಳ ದಿನಗಳನ್ನು ನಿರ್ಣಯಿಸುವುದು ಚಾಂದ್ರಮಾನ ಅಥವಾ ನಿರಯನ ಪಂಚಾಂಗದ ಪ್ರಕಾರ. ಆದರೆ, ಮಕರ ಸಂಕ್ರಾಂತಿ ಮಾತ್ರ ಇದಕ್ಕೆ ಹೊರತಾಗಿದೆ. ಅದು ಸೂರ್ಯನ ಪರಿಭ್ರಮಣೆಯ ಆಧಾರದ ಸೌರಮಾನ ಅಥವಾ ಸಾಯನ ಪಂಚಾಗ ಆಧರಿತವಾಗಿದೆ. ಯಾಕೆಂದರೆ ಚಂದ್ರನ ಚಲನೆಯನ್ನು ಆಧರಿಸಿ (ಚಾಂದ್ರಮಾನ ಪದ್ಧತಿ ಪ್ರಕಾರದ ಪಂಚಾಂಗ ಅನುಸರಿಸಿ) ನೋಡಿದರೆ, ಉತ್ತರಾಯನ ಅಂದರೆ ಸೂರ್ಯನ ಉತ್ತರಾಭಿಮುಖ ಚಲನೆ ಆರಂಭವಾಗುವುದು ಡಿಸೆಂಬರ್ 22ರ ಆಸುಪಾಸಿನಲ್ಲಿ ಬರುವ ವೈಕುಂಠ ಏಕಾದಶಿಯಂದು. ಅಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಕಾರಣಕ್ಕೇ ಶರಶಯ್ಯೆಯಲ್ಲಿದ್ದ 'ಇಚ್ಛಾಮರಣಿ' ಭೀಷ್ಮಾಚಾರ್ಯರು ಉತ್ತರಾಯಣ ಪುಣ್ಯಕಾಲದಲ್ಲಿ ದೇಹತ್ಯಾಗಕ್ಕಾಗಿ ಕಾದರು.

ಸೂರ್ಯನು ಉತ್ತರಾಭಿಮುಖವಾಗಿ ಪರಿಭ್ರಮಣ ನಡೆಸುವ ಈ ಉತ್ತರಾಯಣದ ಆರು ತಿಂಗಳ ಕಾಲವು ಅತ್ಯಂತ ಶ್ರೇಷ್ಠವಾದ ಶುಭ ದಿನಗಳನ್ನು ಹೊಂದಿರುತ್ತವೆ. ಈ ಅವಧಿಯಲ್ಲಿ ಮದುವೆ, ಗೃಹಪ್ರವೇಶ, ವಿವಾಹವೇ ಮೊದಲಾದ ಮಂಗಳ ಕಾರ್ಯಗಳು ಜರುಗುತ್ತವೆ.

ನಮಗೆ ಹಿರಿಯರು ಹೇಳಿದ್ದಿದೆ- ಮಗೂ... ನಮಗೆ ಒಂದು ವರ್ಷ ಎಂದರೆ, ದೇವ ದೇವತೆಗಳಿಗೆ ಒಂದು ದಿನ ಇದ್ದ ಹಾಗೆ ಎಂಬುದಾಗಿ. ಅದನ್ನೇ ನೆನಪಿಸಿಕೊಂಡು ಹೇಳಬಹುದಾದರೆ, ಆ ದೇವ ದೇವತೆಗಳ ಒಂದು ದಿನದಲ್ಲಿ ಆರು ತಿಂಗಳ ಹಗಲು ಆರಂಭವಾಗುವುದು ಉತ್ತರಾಯನ (ಉತ್ತರಾಯಣ) ಪುಣ್ಯಕಾಲದಲ್ಲಿ. ಕೊನೆಗೊಳ್ಳುವುದು ದಕ್ಷಿಣಾಯನದಲ್ಲಿ (ಸೂರ್ಯನು ಕರ್ಕ ರಾಶಿಗೆ ಪ್ರವೇಶಿಸಿದಾಗ - ಕರ್ಕ ಸಂಕ್ರಮಣ). ಉತ್ತರಾಯಣದಲ್ಲಿ ಹಗಲು ಹೆಚ್ಚಾಗಿ ರಾತ್ರಿ ಕಡಿಮೆ ಇದ್ದರೆ, ದಕ್ಷಿಣಾಯನದಲ್ಲಿ ರಾತ್ರಿ ಹೆಚ್ಚು, ಹಗಲಿನ ಅವಧಿ ಕಡಿಮೆ. ಸೌರಮಾನವೋ, ಚಾಂದ್ರಮಾನವೋ, ಸಾಯನವೋ... ನಿರಯನವೋ...ಒಟ್ಟಿನಲ್ಲಿ ಸೂರ್ಯ ಉತ್ತರಾಭಿಮುಖ ಚಲನೆ ಆರಂಭಿಸಿದ ಬಳಿಕ ಮೊದಲು ಬರುವ ಸಂಕ್ರಮಣವಿದು. ದೇವಾನುದೇವತೆಗಳ ರಾತ್ರಿ ಕಳೆದು ಹಗಲಾಗುವ ದಿನ ಈ ಮಕರ ಸಂಕ್ರಮಣ. ಅದೇ ರೀತಿ ನಮ್ಮ ಜೀವನದಲ್ಲೂ ಕತ್ತಲು ಕಳೆಯಲಿ, ಬೆಳಕು ಮೆರೆಯಲಿ... ಎಳ್ಳು ಬೆಲ್ಲವ ತಿಂದು ನಾಲ್ಕು ಒಳ್ಳೆಯ ಮಾತಾಡುವಂತಾಗಲಿ...

ಶುಭಂ

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments