Select Your Language

Notifications

webdunia
webdunia
webdunia
webdunia

ಪ್ರಶಸ್ತಿಯ ಸಿಂಹಾಸನದಲ್ಲಿ ಅರಮನೆಯ ರಾಜ ಕುಂವೀ

ಪ್ರಶಸ್ತಿಯ ಸಿಂಹಾಸನದಲ್ಲಿ ಅರಮನೆಯ ರಾಜ ಕುಂವೀ
ವಿಶೇಷ ಲೇಖನ: ಯಗಟಿ ರಘು ನಾಡಿಗ್ (ನ್ಯೂಸ್ ರೂಮ್)

ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ ಅರಮನೆ ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.

ಪ್ರಶಸ್ತಿ ಬಂದಿದ್ದಕ್ಕೆ ಕುಂವೀ ಖುಶ್, ಅವರ ಅಭಿಮಾನಿಗಳಂತೂ ದಿಲ್ ಖುಶ್, ಅವರನ್ನು ಆದರ್ಶವಾಗಿಟ್ಟುಕೊಂಡಿರುವ ಹಳ್ಳಿಗಾಡಿನ ಲೇಖಕರಂತೂ ಫುಲ್ ಖುಶ್..!!

ಅದಕ್ಕೆ ಕಾರಣಗಳೂ ಇವೆ. ಕುಂವೀ ಬರೆದದ್ದು ಕನ್ನಡದಲ್ಲಿ ಎನ್ನುವುದಕ್ಕಿಂತ ಅಪ್ಪಟ ಪ್ರಾಂತೀಯ ಭಾಷೆಯ ಸೊಗಡಲ್ಲಿ ಎನ್ನಬಹುದು. ಈ ಮಣ್ಣಿನ ಒಂದೊಂದು ಕಣವೂ ಅವರ ಸಾಹಿತ್ಯದ ಒಂದೊಂದು ಅಕ್ಷರವನ್ನು ರೂಪಿಸಿದೆ ಎಂದರೆ ಅದು ಅತಿಶಯೋಕ್ತಿಯೇನಲ್ಲ. ಅವರ ಬರಹ ಬೇರೆ ಅಲ್ಲ, ಬದುಕು ಬೇರೆ ಅಲ್ಲ ಎಂಬಷ್ಟರ ಮಟ್ಟಿಗೆ ಆತ ಹಳ್ಳಿಗ. ಮಣ್ಣಿನ ಮಗ ಎಂಬ ಅನ್ವರ್ಥನಾಮ ಸಾಹಿತ್ಯ ವಲಯದಲ್ಲಿ ಯಾರಿಗಾದರೂ ಸಲ್ಲಬೇಕೆಂದಿದ್ದರೆ ಅದಕ್ಕೆ ಕುಂವೀ ನಿಸ್ಸಂದೇಹವಾಗಿ ಅರ್ಹರಾಗುತ್ತಾರೆ.

ಭಾರತದ ಆತ್ಮ ಹಳ್ಳಿಗಳಲ್ಲಿದೆ, ಹಳ್ಳಿಗಳ ಉದ್ದಾರವಾಗದೆ ದೇಶದ ಉದ್ದಾರವಾಗದು ಎಂದೇ ಮಹಾತ್ಮಾ ಗಾಂಧೀಜಿ ಹೇಳುತ್ತಿದ್ದರು. ಸಾಹಿತ್ಯಕ್ಕೆ ಸಂಬಂಧಿಸಿ ಹೇಳುವುದಾದರೆ ಹಳ್ಳಿಯ ವಾತಾವರಣವನ್ನೇ ತಮ್ಮ ಎಲ್ಲ ಸಾಹಿತ್ಯದ ಹೂರಣವನ್ನಾಗಿಸಿಕೊಂಡಿರುವುದು ಕುಂವೀ ವಿಶಿಷ್ಟತೆ. ಹಾಗಾಗಿ ಪಟ್ಟಣ, ನಗರಗಳ ಬಹುತೇಕ ಲೇಖಕರ ಸಾಹಿತ್ಯದಲ್ಲಿ ಕಂಡುಬರುವ ಕೃತಕತೆ ಇಲ್ಲಿರುವುದಿಲ್ಲ. ಇವರ ಸಾಹಿತ್ಯ -ಭಾವನೆಗೆ ಸಂಬಂಧಿಸಿ ಮುಗ್ಧವೂ ಹೌದು, ಭಾಷೆಗೆ ಸಂಬಂಧಿಸಿ ಒರಟೂ ಹೌದು.

ಶಿಕ್ಷಕ ವೃತ್ತಿಯಲ್ಲಿರುವ ಕುಂವೀ ಆಂಧ್ರಪ್ರದೇಶದ ಹಳ್ಳಿಗಾಡಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮೆಲ್ಲಾ ಚೈತನ್ಯ ಹಾಗೂ ಆರೋಗ್ಯಕ್ಕೆ ಹಳ್ಳಿಗಾಡಿನ ಸಹವಾಸವೇ ಕಾರಣ ಎಂಬಷ್ಟರ ಮಟ್ಟಿಗೆ ಅವರಿಗೆ ಹಳ್ಳಿಗಳೆಡೆಗೆ ಕೃತಜ್ಞತಾ ಭಾವ. ಮಕ್ಕಳಲ್ಲಿ ಕಂಡುಬರುವ ಹಳ್ಳಿಯ ಜಾತ್ರೆಗೆ ಹೋಗುವ, ಅಪ್ಪನ ಹೆಗಲೇರಿ ದೇವರ ತೇರು ನೋಡುವ, ಮನದಣಿಯೆ ನೀರಲ್ಲಿ ಈಜುವಂಥ ಆಸೆ ವ್ಯಕ್ತಪಡಿಸುವ ಕುಂವೀ ಯಾವುದೇ ಅಕಾಡೆಮಿ ಕುರ್ಚಿಗೆ ಆಸೆ ಪಡಲಿಲ್ಲ ಎಂಬುದು ಅವರ ಮಿತಿಯೋ, ನಿರಾಸಕ್ತ ಯೋಗವೋ ಎಂಬುದನ್ನು ಬಲ್ಲವರೇ ಬಲ್ಲರು.

ಕುಂವೀ ಸಾಹಿತ್ಯದಲ್ಲಿ ತುಂಬಾ ಕಸುವಿರುತ್ತದೆ ಎಂದು ಯಾರಿಂದಲೋ ಕೇಳಿ ತಿಳಿದಿದ್ದ ಚಲನಚಿತ್ರ ನಿರ್ದೇಶಕರೊಬ್ಬರು ಸುಮಾರು ವರ್ಷಗಳ ಹಿಂದೆ ಅವರನ್ನು ಬೆಂಗಳೂರಿನ ಹೊಟೇಲ್ ರೂಮಿಗೆ ಕರೆಸಿ, ಏನ್ರೀ, ನೀವೇನೋ ಕತೆ-ಗಿತೆ ಬರೀತೀರಂತೆ? ನಂಗೊಂದು ಬರ್ಕೊಡಿ ಅಂತ ಹೇಳಿ ಸಾವಿರ ರೂ. ಕೊಟ್ಟರಂತೆ. ಅವರ ನಡವಳಿಕೆಯಿಂದ ಬೇಸತ್ತರೂ ಸ್ಥಳದಲ್ಲಿ ಏನನ್ನೂ ಹೇಳದ ಕುಂವೀ ಊರಿಗೆ ಬಂದನಂತರ ಆ ಹಣವನ್ನು ಸದರಿ ನಿರ್ದೇಶಕರಿಗೆ ವಾಪಸ್ ಕಳಿಸಿದರಂತೆ. ಇದು ನಾವೆಲ್ಲ ಪತ್ರಿಕೆಗಳಲ್ಲಿ ಓದಿದ್ದ ಸುದ್ದಿ. ಕುಂವೀಯವರ ಸ್ವಾಭಿಮಾನಕ್ಕೆ ನಮ್ಮೂರಿಂದಲೇ ಚಪ್ಪಾಳೆ ತಟ್ಟಿದ್ದೆವು.

ಹೀಗಿದ್ದರೂ ಸಹ ಅವರ ಕಾದಂಬರಿಗಳಲ್ಲಿ ಕೊಟ್ ಹೈಸ್ಕೂಲಿಗೆ ಸೇರಿದ್ದು, ಕೆಂಡದ ಮಳೆ, ಬೇಟೆ ಮೊದಲಾದವುಗಳು ಚಲನಚಿತ್ರಗಳಾಗಿವೆ, ಮತ್ತಷ್ಟು ಹೆಸರನ್ನು ತಂದುಕೊಟ್ಟಿವೆ. ಲಾಭ ಮಾತ್ರ ನಿರ್ಮಾಪಕರಿಗಷ್ಟೇ ಸಿಕ್ಕಿತು ಎಂಬುದು ಕಹಿಸತ್ಯ.

ಮತ್ತೇನು ಹೇಳುವುದು? ಕುಂವೀ ಮತ್ತಷ್ಟು ಸತ್ವಯುತ ಸಾಹಿತ್ಯ ಸೃಷ್ಟಿಸಲಿ, ಅವುಗಳಿಂದ ಈ ನೆಲದ ಘಮಲು ಹೊಮ್ಮಲಿ, ಅದರಲ್ಲಿ ನಾವೆಲ್ಲಾ ನಮ್ಮ ಬಾಲ್ಯದ ಹಳ್ಳಿಯ ದಿನಗಳಿಗೆ ಪಯಣ ಮಾಡುವಂತಾಗಲಿ, ಅಷ್ಟೇ.




Share this Story:

Follow Webdunia kannada