ಇಂದು ನಾಮಪತ್ರ ಸಲ್ಲಿಸಲಿರುವ ಅಡ್ವಾಣಿ, ಸಾಥ್ ನೀಡಲಿದ್ದಾರೆ ಮೋದಿ
ಗಾಂಧಿನಗರ , ಶನಿವಾರ, 5 ಏಪ್ರಿಲ್ 2014 (11:54 IST)
ಲೋಕಸಭಾ ಚುನಾವಣೆಗಾಗಿ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಶನಿವಾರ ಗುಜರಾತ್ನ ಗಾಂಧಿನಗರದಿಂದ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಅವರೊಂದಿಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಉಪಸ್ಥಿತರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಮಪತ್ರ ತುಂಬಿದ ತರುವಾಯ ಇಬ್ಬರು ಸೇರಿ ಪ್ರಚಾರ ಸಭೆಯೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅಡ್ವಾಣಿ ಮತ್ತು ಮೋದಿ ಸಂಬಂಧದಲ್ಲಿ ಯಾವುದು ಕೂಡ ಸರಿಯಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಹಾಗಾಗಿ ಇಂದಿನ ಸಭೆ ಅವರ ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಸಂದೇಶ ಕೊಡುವ ಪ್ರಯತ್ನವಾಗಿದೆ. ಪ್ರಾರಂಭದಲ್ಲಿ ಅಡ್ವಾಣಿ ಮಧ್ಯಪ್ರದೇಶದ ಭೋಪಾಲದಿಂದ ಕಣಕ್ಕಿಳಿಯುವ ಇಚ್ಛೆ ವ್ಯಕ್ತ ಪಡಿಸಿದ್ದರು. ಆದರೆ ಪಕ್ಷ ಮತ್ತು ಆರ್ಎಸ್ಎಸ್ ನಾಯಕರ ಹಸ್ತಕ್ಷೇಪದಿಂದ ಗಾಂಧಿನಗರದಿಂದ ಹೋರಾಡಲು ರಾಜಿಯಾಗಿದ್ದರು. ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್ ಕೂಡ ಇಂದು ಲಖನೌನಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಅವರಿಗೆ ಎದುರಾಗಿ ಕಾಂಗ್ರೆಸ್ಸಿನಿಂದ ರೀಟಾ ಬಹುಗುಣ ಜೋಶಿ, ಸಮಾಜವಾದಿ ಕಡೆಯಿಂದ ಅಭಿಷೇಕ್ ಮಿಶ್ರಾ, ಬಿಎಸ್ಪಿಯ ನಕುಲ್ ದುಬೇ,ಆಪ್ ಪಕ್ಷದಿಂದ ಜಾವೇದ್ ಜಾಫ್ರಿ ಕಣಕ್ಕಿಳಿಯಲಿದ್ದಾರೆ.