Select Your Language

Notifications

webdunia
webdunia
webdunia
webdunia

ಸೆಕ್ಯೂಲರ್ ಪವನ್ ಕಲ್ಯಾಣ್ ನರೇಂದ್ರ ಮೋದಿಯನ್ನು ಭೇಟಿಯಾಗಬಾರದಿತ್ತು: ಚಿರಂಜೀವಿ

ಸೆಕ್ಯೂಲರ್ ಪವನ್ ಕಲ್ಯಾಣ್ ನರೇಂದ್ರ ಮೋದಿಯನ್ನು ಭೇಟಿಯಾಗಬಾರದಿತ್ತು: ಚಿರಂಜೀವಿ
ಹೈದ್ರಾಬಾದ್ , ಶನಿವಾರ, 22 ಮಾರ್ಚ್ 2014 (18:42 IST)
PTI
ಸಹೋದರ ಪವನ್ ಕಲ್ಯಾಣ ಜಾತ್ಯಾತೀತ ಮನೋಭಾವದವರಾಗಿದ್ದು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿರುವುದು ಅಚ್ಚರಿ ತಂದಿದೆ ಎಂದು ಕೇಂದ್ರ ಸಚಿವ ಮತ್ತು ಮೆಗಾಸ್ಟಾರ್ ಕೆ.ಚಿರಂಜೀವಿ ಹೇಳಿದ್ದಾರೆ.

ವಿಶಾಖಪಟ್ಟಣಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋದ್ರೋತ್ತರ ಗಲಭೆಯಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಮೋದಿಯನ್ನು ಪವನ್ ಕಲ್ಯಾಣ ಭೇಟಿ ಮಾಡಬಾರದಾಗಿತ್ತು ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.

ನನ್ನ ಸಹೋದರ ಜಾತ್ಯಾತೀತ ಮನೋಭಾವನೆ ಹೊಂದಿರುವ ವ್ಯಕ್ತಿ. ಆದರೆ, ಬಿಜೆಪಿಯಲ್ಲಿನ ಕೋಮುವಾದಿ ನಾಯಕರುಗಳನ್ನು ಭೇಟಿ ಮಾಡುತ್ತಿರುವುದು ಆಶ್ಚರ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೋದ್ರೋತ್ತರ ಗಲಭೆಯಲ್ಲಿ ಮೋದಿ ಭಾಗಿಯಾಗಿರುವ ಬಗ್ಗೆ ಅವರಿಗೆ ಮಾಹಿತಿ ಇರಲಿಕ್ಕಿಲ್ಲ ಎಂದು ನನಗೆ ಸಂಶಯವಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಇತರ ಬಿಜೆಪಿ ನಾಯಕರು ಮುಸ್ಲಿಂ ಸಮುದಾಯದ ಕ್ಷಮೆಕೋರಿದ್ದಾರೆ. ಆದರೆ, ಮೋದಿ ಗೋದ್ರೋತ್ತರ ಗಲಭೆಯ ಬಗ್ಗೆ ಹೇಳಿಕೆಯೂ ನೀಡಿಲ್ಲ ಅಥವಾ ಕ್ಷಮೆ ಕೂಡಾ ಕೋರಿಲ್ಲ ಎಂದರು.

ತೆಲುಗು ಚಿತ್ರರಂಗದಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಿರುವ ನಟ ಪವನ್ ಕಲ್ಯಾಣ್ ಕಳೆದ ವಾರ ಜನಸೇನಾ ಎನ್ನುವ ಪಕ್ಷವನ್ನು ಹುಟ್ಟುಹಾಕಿ, ಮೋದಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

Share this Story:

Follow Webdunia kannada