' ಎರಡು ಬಾರಿ ಮತ ಚಲಾಯಿಸಿ' ಎಂದು ತನ್ನ ಬೆಂಬಲಿಗರಿಗೆ ಕರೆ ನೀಡುವುದರ ಮೂಲಕ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಕೇಂದ್ರ ಸಚಿವ ಶರದ್ ಪವಾರ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನವಿ ಮುಂಬೈನಲ್ಲಿ ನಡೆದ ಸಭೆಯಲ್ಲಿ ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಪವಾರ್ "ನೀವು ನಿಮ್ಮ ನಿಮ್ಮ ಊರುಗಳಲ್ಲಿ ಮೊದಲು ಓಟು ಮಾಡಿ, ನಿಮ್ಮ ಕೈ ಮೇಲಿನ ಶಾಯಿಯನ್ನು ಅಳಿಸಿ. ಮತ್ತೆ ನೀವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಮತ್ತೆ ಮತ ಚಲಾಯಿಸಿ " ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಮಹಾರಾಷ್ಟ್ರ ಚುನಾವಣೆ ಅಧಿಕಾರಿಗಳು ಸ್ಪಷ್ಟನೆ ಕೇಳಿದ್ದಾರೆ.
ನಂತರ 73 ವರ್ಷದ ರಾಜಕಾರಣಿ ತನ್ನ ಕಾಮೆಂಟಿಗೆ ಅದು ಆ ಸಂದರ್ಭಕ್ಕೆ ಬಂದ ಮಾತು ಎಂದು ಸ್ಪಷ್ಟನೆ ನೀಡಿದ್ದಾರೆ.
" ನಾನು ಮತ ಚಲಾಯಿಸುವಂತೆ ಜನರನ್ನು ಪ್ರೋತ್ಸಾಹಿಸಲು ಬಯಸಿದ್ದೆ. ಸರಿಯಾದ ನಿರ್ಧಾರವನ್ನು ತೆಗೆದುಕೊಂಡು ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ ಜನರಲ್ಲಿ ಮನವಿ ಮಾಡುತ್ತಿದ್ದೆ " ಎಂದು ಅವರು ವರದಿಗಾರರಲ್ಲಿ ತಿಳಿಸಿದರು.