ಬಿಹಾರ್ ಸಿಎಂ ನಿತೀಶ್ ಕುಮಾರ್ ಮೇಲೆ ಕಲ್ಲು, ಚಪ್ಪಲಿ ತೂರಾಟ
ಪಾಟ್ಣಾ , ಮಂಗಳವಾರ, 1 ಏಪ್ರಿಲ್ 2014 (15:40 IST)
ಇಂದು ಬೆಳಿಗ್ಗೆ ನಲಂದಾದಲ್ಲಿ ನಡೆಸುತ್ತಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ ಹಿಂಸಾತ್ಮಕ ಪ್ರತಿಭಟನೆಯನ್ನು ಎದುರಿಸಿದ್ದಾರೆ. ನಾಯಕನಿಗೆ ಪ್ರತಿಭಟನಾಕಾರರು ಕಲ್ಲು, ಚಪ್ಪಲಿಗಳನ್ನು ಎಸೆದರು.
ನಲಂದಾದ ನಾಗರಿಕರಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಮುಖ್ಯಮಂತ್ರಿಗೆ ಕಲ್ಲೆಸೆದಿದ್ದಾರೆ. ಆದರೆ ಪ್ರತಿಭಟನಾಕಾರರು ಮತ್ತು ವೇದಿಕೆಯ ನಡುವೆ ಅಂತರ ದೊಡ್ಡದಿದ್ದ ಕಾರಣ ಅವರು ಎಸೆದ ಕಲ್ಲು ಗುರಿ ತಲುಪಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.ಗುಂಪನ್ನು ಚದುರಿಸಲು ಪೋಲಿಸರು ಲಾಠಿ ಚಾರ್ಜ್ ಮಾಡಿದರು. ಆನಂತರ ಖುಶ್ರುಪುರದಲ್ಲೂ ಕೂಡ ನಿತೀಶ್ ಜನರಿಂದ ದಾಳಿಗೊಳಗಾದರು. ಪಾಟ್ನಾ ಸಾಹಿಬ್ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿರುವ ತಮ್ಮ ಪಕ್ಷದ ಅಭ್ಯರ್ಥಿ ಗೋಪಾಲ್ ಪ್ರಸಾದ್ ಸಿನ್ಹಾ ಪರವಾಗಿ ಪ್ರಚಾರ ನಡೆಸಿ ಹೆಲಿಕಾಪ್ಟರ್ ಹತ್ತುತ್ತಿದ್ದ ವೇಳೆ ಪ್ರತಿಭಟನಾಕಾರರು ಅವರನ್ನು ಗುರಿಯಿಟ್ಟು ಚಪ್ಪಲಿ ಬಿಸಾಡಿದರು ಎಂದು ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಇದು ಪ್ರತಿಸ್ಪರ್ಧಿಗಳ ಪಿತೂರಿ ಎಂದು ಹೇಳಿದ್ದಾರೆ.