ಬಿಜೆಪಿ ವರಿಷ್ಠರ ವಿರುದ್ಧ ಗುಡುಗಿದ ಆಡ್ವಾಣಿ: ಮನವೊಲಿಕೆಗೆ ಧಾವಿಸಿದ ಮೋದಿ, ಸುಷ್ಮಾ
ನವದೆಹಲಿ , ಗುರುವಾರ, 20 ಮಾರ್ಚ್ 2014 (13:48 IST)
ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡದಿರುವ ಪಕ್ಷದ ನಿಲುವಿನಿಂದ ಉಕ್ಕಿನ ಮನುಷ್ಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ಬೆಳಿಗ್ಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆಡ್ವಾಣಿ ನಿವಾಸಕ್ಕೆ ಭೇಟಿ ನೀಡಿ, ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸುಮಾರು ಅರ್ಧಗಂಟೆಗಳ ಕಾಲ ಮನವೊಲಿಸಲು ಪ್ರಯತ್ನಿಸಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. ಬಿಜೆಪಿ ಪಕ್ಷದ ಉನ್ನತ ಸಂಸದೀಯ ಸಮಿತಿ ಮತ್ತು ಕೇಂದ್ರ ಚುನಾವಣಾ ಸಮಿತಿ ಸಭೆ ಸೇರಿ ಆಡ್ವಾಣಿ ಗಾಂಧಿನಗರದಿಂದ ಸ್ಪರ್ಧಿಸುವುದು ಸೂಕ್ತ. ಭೋಪಾಲ್ ಕ್ಷೇತ್ರದಲ್ಲಿ ಸ್ಪರ್ಧೆ ಬೇಡ ಎನ್ನುವ ನಿರ್ಧಾರ ಪ್ರಕಟಿಸಿತ್ತು. ಬಿಜೆಪಿಯ ಇತರ ನಾಯಕರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತು ಮೋದಿಯವರಂತೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯ ನೀಡಬೇಕು ಎಂದು ಆಡ್ವಾಣಿ ಒತ್ತಾಯಿಸಿರುವುದಾಗಿ ಮೂಲಗಳು ತಿಳಿಸಿವೆ. 86
ವರ್ಷ ವಯಸ್ಸಿನ ಆಡ್ವಾಣಿ ಪಕ್ಷದ ಇತರ ಹಿರಿಯ ನಾಯಕರಾದ ಸುಷ್ಮಾ ಸ್ವರಾಜ್ ಮತ್ತು ನಿತಿನ್ ಗಡ್ಕರಿ ಅವರಲ್ಲಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.ನಿನ್ನೆ ರಾತ್ರಿ ನರೇಂದ್ರ ಮೋದಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿ, ಆಡ್ವಾಣಿ ವಿವಾದವನ್ನು ಬಗೆಹರಿಸುವಂತೆ ಮನವಿ ಮಾಡಿದ್ದಾರೆ.