ಮಗ ರೋಹಿತ್ ಶೇಖರ್ ಜತೆ ತಾನು ಸ್ಪರ್ಧಿಸುತ್ತಿರುವ ನೈನಿತಾಲ್ ಕ್ಷೇತ್ರದ 10 ದಿನಗಳ ಪ್ರವಾಸ ಪ್ರಾರಂಭಿಸಿರುವ ಅವರು "ಈ ಕ್ಷೇತ್ರದಿಂದ ನಾನು ಸ್ಪರ್ಧಿಸಬೇಕೋ ಅಥವಾ ನನ್ನ ಮಗನೋ ಎಂದು ಜನರನ್ನು ಕೇಳಲು ಬಂದಿದ್ದೇನೆ " ಎಂದು ಹೇಳಿದ್ದಾರೆ.
" ನಮ್ಮಿಬ್ಬರಲ್ಲಿ ಯಾರು ಸ್ಪರ್ಧಿಸಬೇಕು ಎಂದು ಜನರು ನಿರ್ಧರಿಸಬೇಕು. ಸಾರ್ವಜನಿಕರ ಅಭಿಪ್ರಾಯ ತಿಳಿದ ಮೇಲೆ ಅಷ್ಟೇ ನಾನು ನನ್ನ ನಿರ್ಧಾರವನ್ನು ತಿಳಿಸಲು ಸಾಧ್ಯ ಎಂದು ಉತ್ತರಪ್ರದೇಶ ಮತ್ತು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಎನ್.ಡಿ. ತಿವಾರಿ ವರದಿಗಾರರಿಗೆ ತಿಳಿಸಿದ್ದಾರೆ.
" ಕಾಂಗ್ರೆಸ್ ನನಗೆ ಅಥವಾ ನನ್ನ ಮಗ, ಯಾರಿಗೆ ಬೇಕಾದರೂ ಟಿಕೆಟ್ ನೀಡಲಿ. ನಾನು ಕೇವಲ ಪ್ರದೇಶದ ಪ್ರಗತಿಯನ್ನು ಬಯಸುತ್ತೇನೆ. ರೋಹಿತ್ ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವ ಒಬ್ಬ ಅರ್ಹ ಯುವಕ. ಆತ ಸ್ಪರ್ಧಿಸುವುದನ್ನು ನಾನು ಉತ್ತೇಜಿಸುತ್ತೇನೆ "ಎಂದು ಅವರು ಹೇಳಿದ್ದಾರೆ.
ತಿವಾರಿ ಇತ್ತೀಚೆಗೆ, ದೀರ್ಘಕಾಲದ ಕಾನೂನು ಸಮರದ ನಂತರ ರೋಹಿತ ತಮ್ಮ ಜೈವಿಕ ಪುತ್ರ ಎಂದು ಒಪ್ಪಿಕೊಂಡಿದ್ದರು .
ನನ್ನ ತಂದೆ ಉತ್ಕೃಷ್ಟ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಅವರ ಅಧಿಕಾರಾವಧಿಯ ಸಮಯದಲ್ಲಿ ಪ್ರದೇಶದ ಜನರಿಗಾಗಿ ದುಡಿದಿದ್ದಾರೆ ಎಂದು ತಂದೆಯನ್ನು ಕೊಂಡಾಡಿರುವ ರೋಹಿತ್ ಶೇಖರ್ ನಮ್ಮ ತಂದೆಗೆ ಪಕ್ಷ ಟಿಕೆಟ್ ನೀಡಲಿದೆ ಎಂಬ ಆಶಯ ವ್ಯಕ್ತ ಪಡಿಸಿದ್ದಾರೆ.
" ನನ್ನ ತಂದೆಯ ಸಲಹೆಯಂತೆ ಈ ಕ್ಷೇತ್ರದ ಜನರು ನಾನು ಕಣಕ್ಕಿಳಿಯಬೇಕು ಹೇಳಿದರೆ ಅಪ್ಪನ ಆಶೀರ್ವಾದೊಂದಿಗೆ ನಾನು ಸ್ಪರ್ಧಿಸುತ್ತೇನೆ " ಎಂದು ರೋಹಿತ್ ಶೇಖರ್ ಹೇಳಿದರು.