ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ನಾನು ಹೇಳಿಲ್ಲ ಎಂದು ಶ್ರೀ ಶ್ರೀ ರವಿಶಂಕರ ಗುರೂಜಿ ಇದೀಗ ಉಲ್ಟಾ ಹೊಡೆದಿದ್ದಾರೆ.
ಕೆಲ ದಿನಗಳ ಹಿಂದೆ ದೇಶದ ಅಡಳಿತದ ಚುಕ್ಕಾಣಿ ರಾಹುಲ್ನಂತ ಯುವಕರಿಗೆ ಸೂಕ್ತವಲ್ಲ. ಮೋದಿಯಂತಹ ಅನುಭವಿಗಳು ಅಡಳಿತ ಚುಕ್ಕಾಣಿ ಹಿಡಿಯಬೇಕು ಎಂದು ಹೇಳಿಕೆ ನೀಡಿದ್ದ ಧಾರ್ಮಿಕ ಗುರು ಇದೀಗ ಮತ್ತೊಂದು ಹೇಳಿಕೆ ನೀಡಿ ವಿವಾದ ಸೃಷ್ಠಿಸಿದ್ದಾರೆ.
ಬಿಜೆಪಿ ಪಕ್ಷಕ್ಕೆ ಮತ ಹಾಕಿ ಎಂದು ಜನತೆಗೆ ನಾನು ಯಾವತ್ತೂ ಹೇಳಿಲ್ಲ. ಆದರೆ, ಕೇಂದ್ರದಲ್ಲಿ ಸ್ಥಿರ ಸರಕಾರ ಅಧಿಕಾರಕ್ಕೆ ಬರಬೇಕು ಎನ್ನುವುದೇ ನಮ್ಮ ಬಯಕೆ ಎಂದರು.
ದೇಶದ ಕೆಲ ಮಾಧ್ಯಮಗಳು ಗುಜರಾತ್ನಲ್ಲಿ ಮೋದಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿರುವುದನ್ನು ಮಾತ್ರ ನಾನು ಉಲ್ಲೇಖಿಸಿದ್ದೆ ಎಂದು ಹೇಳಿ ನುಣುಚಿಕೊಂಡಿದ್ದಾರೆ.
ಕಳೆದ 2002ರಲ್ಲಿ ಗುಜರಾತ್ ದಂಗೆಯಾದಾಗ ಮುಖ್ಯಮಂತ್ರಿ ನರೇಂದ್ರ ಮೋದಿ ಹೊಸ ಮುಖ್ಯಮಂತ್ರಿಯಾಗಿದ್ದರು. ಅವರಿಗೆ ಅನುಭವವಿರಲಿಲ್ಲ. ಇದೀಗ ತುಂಬಾ ಅನುಭವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ದೇಶದ ಪ್ರತಿಯೊಂದು ಪಕ್ಷಗಳು ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನು ಮೊದಲೇ ಘೋಷಿಸಬೇಕು. ದೇಶದ ಜನತೆಗೆ ತಮ್ಮ ಪ್ರಧಾನಿಯಾಗುವ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯಿರಬೇಕು ಎಂದು ಶ್ರೀ ಶ್ರೀ ಶ್ರೀ ರವಿಶಂಕರ್ ಸಲಹೆ ನೀಡಿದ್ದಾರೆ.