ಕ್ರಿಮಿನಲ್ ಕೇಸ್ನಲ್ಲಿ ಕಾಣಿಸಿಕೊಂಡಿರುವ ಕಾರಣಕ್ಕೆ ಈಗಾಗಲೇ ಉತ್ತರಪಶ್ಚಿಮ ದೆಹಲಿ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿದ್ದ ಮಹೇಂದ್ರಸಿಂಗ್ರನ್ನು ಅನರ್ಹಗೊಳಿಸಿರುವ ಆಮ್ ಆದ್ಮಿ ಪಕ್ಷ, ಸಿಂಗ್ ಬದಲಿಗೆ ಮಾಜಿ ಸಚಿವೆ ರಾಖಿ ಬಿರ್ಲಾರವರನ್ನು ಕಣಕ್ಕಿಳಿಸಲಿದೆ.
ಈ ಕುರಿತು ಆಪ್ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲವಾದರೂ ಸಾಮಾಜಿಕ ಕಾರ್ಯಕರ್ತ ಸಿಂಗ್, ವಿರುದ್ಧ ಪ್ರಕರಣ ದಾಖಲಾಗಿರುವ ವಿಷಯ ನಮಗೆ ಗೊತ್ತಿರಲಿಲ್ಲ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿಯಲು ಒಪ್ಪಿಕೊಂಡಿದ್ದಾರೆ ಎಂದು ಅಪ್ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಂಗ್ "ಪಕ್ಷದ ನಿರ್ಧಾರದ ವಿರುದ್ಧ ನಾನು ದೂರುವುದಿಲ್ಲ. ಈಗಲೂ ನಾನು ಪಾರ್ಟಿಯ ಕಾರ್ಯಕರ್ತನಾಗಿ ಉಳಿಯುತ್ತೇನೆ ಮತ್ತು ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಅತ್ಯುತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪಕ್ಷ ಸ್ವತಂತ್ರವಾಗಿದೆ "ಎಂದು ಹೇಳಿದ್ದಾರೆ.
ಮಾಜಿ ಪತ್ರಕರ್ತೆಯಾಗಿರುವ ರಾಖಿ ಬಿರ್ಲಾ 49 ದಿನಗಳ ಕೇಜ್ರಿವಾಲ್ ಸರಕಾರದಲ್ಲಿ ಎಲ್ಲರಿಗಿಂತ ಕಿರಿಯ ಸಚಿವೆಯಾಗಿದ್ದರು.