ಲಂಚವನ್ನು ಪಡೆದು ಟಿಕೆಟ್ ನೀಡುವ ಭರವಸೆ ನೀಡಿದ್ದ ಆಮ್ ಆದ್ಮಿ ಪಕ್ಷದ ಇಬ್ಬರು ಮುಖಂಡರನ್ನು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಉಚ್ಚಾಟಿಸಿದ್ದಾರೆ.
ಪಕ್ಷದ ಮುಖಂಡರಾದ ಅರುಣಾ ಸಿಂಗ್ ಮತ್ತು ಮತ್ತೊಬ್ಬ ನಾಯಕ ಅಭ್ಯರ್ಥಿಯಾಗಬಯಸುವ ಆಕಾಂಕ್ಷಿಗಳಿಗೆ ಲಂಚ ನೀಡಿದಲ್ಲಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಅವರು ಲಂಚ ಪಡೆದಿರಲಿಲ್ಲ.ಮಾತುಕತೆಯ ಹಂತದಲ್ಲಿತ್ತು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಉತ್ತರಪ್ರದೇಶದ ಮಿಸ್ರಿಕ್ ಲೋಕಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜೇಶ್ ಎನ್ನುವವರು ಕೇಜ್ರಿವಾಲ್ಗೆ ದೂರು ನೀಡಿದ್ದರಿಂದ ಇಬ್ಬರು ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಲಂಚ ನೀಡಿದಲ್ಲಿ ಟಿಕೆಟ್ ನೀಡುವುದಾಗಿ ಇಬ್ಬರು ಉಚ್ಚಾಟಿತ ನಾಯಕರು ನೀಡಿದ ಭರವಸೆಯ ಚರ್ಚೆಯನ್ನು ಮೊಬೈಲ್ನಲ್ಲಿ ರಿಕಾರ್ಡ್ ಮಾಡಿ ಕೇಜ್ರಿವಾಲ್ಗೆ ರವಾನಿಸಿದ್ದರು ಎನ್ನಲಾಗಿದೆ.
ಯಾವುದೇ ಅಭ್ಯರ್ಥಿಯ ವಿರುದ್ಧದ ಆರೋಪಗಳನ್ನು ಸೂಕ್ತವಾದ ಸಾಕ್ಷಧಾರಗಳೊಂದಿಗೆ ಬಹಿರಂಗಪಡಿಸಿದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.