ಜಸ್ವಂತ್ ಸಿಂಗ್ರಿಗೆ ಬರ್ಮಾರ್ ಕ್ಷೇತ್ರದ ಟಿಕೆಟ್ ನಿರಾಕರಿಸಿದ ಬಿಜೆಪಿ
ನವದೆಹಲಿ , ಶುಕ್ರವಾರ, 21 ಮಾರ್ಚ್ 2014 (18:48 IST)
ಬರ್ಮಾರ್ ಕ್ಷೇತ್ರದ ಟಿಕೆಟ್ ನೀಡುವಂತೆ ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಇಟ್ಟಿದ್ದ ಬೇಡಿಕೆಯನ್ನು ಶುಕ್ರವಾರ ಭಾರತೀಯ ಜನತಾ ಪಕ್ಷ ತಳ್ಳಿ ಹಾಕಿದೆ. ಅವರ ಬದಲಿಗೆ ಮಾಜಿ ಕಾಂಗ್ರೆಸ್ ಶಾಸಕ ಕರ್ನಲ್ ಸೋನಾರಾಮ್ರಿಗೆ ಆ ಕ್ಷೇತ್ರದ ಟಿಕೆಟ್ ನೀಡಲು ಪಕ್ಷದ ಹೈಕಮಾಂಡ್ ನಿರ್ಧರಿಸಿದೆ. ಪ್ರತಿಸಲ ತಾನು ಸ್ಪರ್ಧಿಸುತ್ತಿದ್ದ ಪಶ್ಚಿಮ ಬಂಗಾಳದ ದಾರ್ಜಿಲಿಂಗ್ ಕ್ಷೇತ್ರದ ಬದಲಿಗೆ ಈ ಸಲ ತನ್ನ ತವರಾದ ರಾಜಸ್ಥಾನದ ಬರ್ಮಾರ್ ಪ್ರಾಂತ್ಯದಿಂದ ಸ್ಪರ್ಧಿಸುವ ಬೇಡಿಕೆ ಅವರದಾಗಿತ್ತು. “ನಾನು ದಾರ್ಜಿಲಿಂಗ್ಗಾಗಿ ನನ್ನಿಂದಾಗುವಷ್ಟನ್ನು ಕೆಲಸ ಮಾಡಿದ್ದೇನೆ. ನನ್ನ ಕೊನೆಯ ಚುನಾವಣೆಯನ್ನು ನನ್ನ ತವರಿಂದ ಎದುರಿಸಲು ಬಯಸುತ್ತೇನೆ ”ಎಂದು ಸಿಂಗ್ ಹೇಳಿದ್ದರು. ನನಗೆ ಬರ್ಮಾರ್ ನಿಂದ ಟಿಕೆಟ್ ನೀಡದಿದ್ದರೆ ನಾನು ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎಂದು ಈ ಹಿಂದೆ ಹೇಳಿದ್ದ ಜಸ್ವಂತ್ ಸಿಂಗ್, ಇದೇ ತಿಂಗಳ 24 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.