ಚುನಾವಣಾ ಸಮರಕ್ಕೆ ಮಹೂರ್ತ ಹತ್ತಿರ ಬರುತ್ತಿದ್ದು ಯಾವ ಪಕ್ಷದಿಂದ ಸ್ಪರ್ಧಿಸಿದರೆ ವಿಜಯಮಾಲೆ ಕೊರಳನ್ನು ಅಲಂಕರಿಸಬಹುದು ಎಂಬ ಲೆಕ್ಕಾಚಾರದಲ್ಲಿ ಮುಳುಗಿರುವ ಅಧಿಕಾರಾಕಾಂಕ್ಷಿಗಳು ಪಕ್ಷದಿಂದ ಪಕ್ಷಕ್ಕೆ ನೆಗೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಉತ್ತರಾಖಂಡ್ನ ಕಾಂಗ್ರೆಸ್ ಸಂಸದ ಸತ್ಪಾಲ್ ಮಹಾರಾಜ್ ಮೋದಿಗೆ ಒಂದು ಅವಕಾಶ ಕೊಟ್ಟು ನೋಡಬೇಕಾಗಿದೆ ಎನ್ನುತ್ತ ಕಾಂಗ್ರೆಸ್ ತೊರೆದು ಬಿಜೆಪಿ ತೆಕ್ಕೆಗೆ ಸೇರಿದ್ದಾರೆ.
ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಸತ್ಪಾಲ್ ಮಹಾರಾಜ್ ರವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಂಗ್, " ಸತ್ಪಾಲ್ ಮಹಾರಾಜರ ಆಗಮನದಿಂದಾಗಿ ಬಿಜೆಪಿಗೆ ಬಲ ಬಂದಿದೆ" ಎಂದು ಹೇಳಿದರು.
ನರೇಂದ್ರ ಮೋದಿಯನ್ನು ಹಾಡಿಹೊಗಳಿದ ಮಹಾರಾಜ್ ,"ನಮೋ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯನ್ನು ಸಾಧಿಸಲಿದೆ. ಚೀನಾ ನಮಗಿಂತ ಹಿಂದುಳಿದಿತ್ತು, ಆದರೆ ಉತ್ತಮ ನಾಯಕತ್ವದಿಂದ ಅದೀಗ ನಮನ್ನು ಮೀರಿಸಿದೆ. ಮೋದಿ ನಾಯಕತ್ವದಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿ ಮುಂದೆ ಹೋಗಲಿದೆ. ಚೀನಾ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿರುವಾಗ, ಅದು ನಮ್ಮಿಂದ ಏಕೆ ಸಾಧ್ಯವಿಲ್ಲ. ನಾವು ಮೋದಿಗೆ ಒಂದು ಅವಕಾಶ ಕೊಟ್ಟು ನೋಡಬೇಕು ” ಎಂದು ತಿಳಿಸಿದರು.
ಮಾಜಿ ಗೃಹ ಸಚಿವ ಬೂಟಾ ಸಿಂಗ್ ಇಂದು ಪಕ್ಷವನ್ನು ಬಿಟ್ಟ ಸ್ವಲ್ಪ ಸಮಯದಲ್ಲೇ ಮಹಾರಾಜ್ ಕೂಡ ರಾಜೀನಾಮೆಯನ್ನು ನೀಡಿದರು.
ಉತ್ತರಾಖಂಡದ ನಾಯಕನಿಗೆ 10 ಶಾಸಕರ ಬೆಂಬಲವಿದೆ ಎಂದು ನಂಬಲಾಗಿದ್ದು, ಒಂದು ವೇಳೆ ಮಹಾರಾಜ್ರನ್ನು ಅನುಸರಿಸಿದರೆ, ಬೆಟ್ಟದ ರಾಜ್ಯ (ಉತ್ತರಾಖಂಡ)ದಲ್ಲಿ ಕಾಂಗ್ರೆಸ್ ಸರ್ಕಾರ ಅಪಾಯದಲ್ಲಿ ಸಿಲುಕಬಹುದು.