ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಜಯಗಳಿಸಲು ಅರ್ಹ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಬಗ್ಗೆ ಆಮ್ ಆದ್ಮಿ ಪಕ್ಷ ಕಟ್ಟು ನಿಟ್ಟಿನ ನಿಲುವು ಅನುಸರಿಸುತ್ತಿದೆ.
ಆಮ್ ಆದ್ಮಿ ಪಕ್ಷದಿಂದ ಸಂಸತ್ತಿಗೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿರುವ ಅಭ್ಯರ್ಥಿಯೊಬ್ಬರು ಪಕ್ಷಕ್ಕೆ 45 ಕೋಟಿ ರೂಪಾಯಿಗಳ ದೇಣಿಗೆ ನೀಡಿದ್ದಾರೆ. ಆದರೆ, ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ದೇಣಿಗೆ ಹಣವನ್ನು ನಿರಾಕರಿಸಿದ್ದಾರೆ.
ಅಪರಿಚಿತ ಅಭ್ಯರ್ಥಿಯೊಬ್ಬ ಆಮ್ ಆದ್ಮಿ ಪಕ್ಷದ ಕಚೇರಿಗೆ 45 ಕೋಟಿ ರೂಪಾಯಿಗಳ ಚೆಕ್ ಕಳುಹಿಸಿ ನನಗೆ ಅಗತ್ಯವಾದ ಕ್ಷೇತ್ರದಲ್ಲಿ ಲೋಕಸಭೆ ಟಿಕೆಟ್ ನೀಡಬೇಕು ಮತ್ತು ನನ್ನ ಹೆಸರನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸಬಾರದು ಎನ್ನುವ ಮನವಿ ಮಾಡಿದ್ದರು.
ಆಮ್ ಆದ್ಮಿ ಪಕ್ಷ ರಾಜಕೀಯ ಪಕ್ಷವಾಗಿ ಅಸ್ತಿತ್ವಕ್ಕೆ ಬಂದ ನಂತರ ಇಲ್ಲಿಯವರೆಗೆ 35 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಸ್ಲೀಕರಿಸಿದೆ.
ಆಮ್ ಆದ್ಮಿ ಪಕ್ಷದ ಮುಖಂಡರೊಬ್ಬರು ಮಾತನಾಡಿ, ಪಕ್ಷ ಹಣದ ರಾಜಕೀಯ ಅಥವಾ ತೋಳಲ್ಬದ ರಾಜಕೀಯ ಮಾಡಲು ಕ್ಷೇತ್ರವನ್ನು ಪ್ರವೇಶಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶ ಮೂಲದ ಉದ್ಯಮಿಯೊಬ್ಬರು ರಾಜ್ಯದಲ್ಲಿ ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಟಿಕೆಟ್ ನೀಡಿದಲ್ಲಿ 2 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಪಕ್ಷಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಆಮ್ ಆದ್ಮಿ ಪಕ್ಷ ಅದನ್ನು ತಳ್ಳಿಹಾಕಿತ್ತು.