ರಾಜ್ಯದ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಹೊಂಡ, ಗುಂಡಿಗಳು ಸಾಮಾನ್ಯವಾಗಿ ಕಾಣುವ ದೃಶ್ಯ. ರಸ್ತೆ ನಿರ್ಮಾಣ ಮಾಡಿ ಎರಡು ತಿಂಗಳಲ್ಲೆ ಗುಂಡಿಗಳು ಸರ್ವೇಸಾಮಾನ್ಯವಾಗಿವೆ. ಈ ಗುಂಡಿಗಳ ಮೇಲೆ ವಾಹನಗಳು ಚಲಿಸಿ ಚಾಲಕರು ಆಸ್ಪತ್ರೆ ಸೇರಿರುವ ಉದಾಹರಣೆಗಳು ಸಾಕಷ್ಟಿವೆ. ಇಂತಹ ಪರಿಸ್ಥಿತಿಯಲ್ಲಿ
ವೇಸ್ಟ್ ಪ್ಲಾಸ್ಟಿಕ್ ಮತ್ತು ಡಾಂಬರ್ ಬಳಸಿ ಜಿಗಣಿ ಇಂಡಸ್ಟ್ರಿಯಲ್ ಏರಿಯಾದ ಎಪಿಸಿ ಸರ್ಕಲ್ನಲ್ಲಿ ಪ್ಲಾಸ್ಟೋನ್ ತಂತ್ರಜ್ಞಾನದ ರಸ್ತೆಯನ್ನು ನಿರ್ಮಿಸಿರುವುದು ಬಿಬಿಎಂಪಿ ನಾಚಿಕೆಯಿಂದ ತಲೆತಗ್ಗಿಸಬೇಕಾಗಿದೆ.
ಮಧುರೈ ಎಂಜಿನಿಯರ್ ಡಾ. ವಾಸುದೇವನ್ ಅವರ ಪ್ಲಾಸ್ಟೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಈ ರಸ್ತೆಯನ್ನು ನಿರ್ಮಿಸಲಾಗಿದೆ. ಜಿಗಿಣಿ ಇಂಡಸ್ಟ್ರಿಯಲ್ ರಸ್ತೆಯನ್ನು ಖಾಸಗಿ ಕಿವಾನಿ ಕಂಪನಿ ಮತ್ತು ಸಾರ್ವಜನಿಕರು ಸೇರಿಕೊಂಡು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ನಿರ್ಮಿಸಿದ್ದಾರೆ. ಕಿವಾನಿ ಸಂಸ್ಥೆ ರಸ್ತೆ ನಿರ್ಮಾಣಕ್ಕಾಗಿ 14 ಲಕ್ಷ ರೂ.ಗಳನ್ನು ವೆಚ್ಚಮಾಡಿದೆ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ಶಾಲಾ ಮಕ್ಕಳೂ, ಸಾರ್ವಜನಿಕರು ಕೈಗೂಡಿಸಿ ಈ ರಸ್ತೆ ಯೋಜನೆಯನ್ನು ಯಶಸ್ವಿಯಾಗಿಸಿದ್ದಾರೆ.
ಜಿಗಣಿ ಕೈಗಾರಿಕೆ ಪ್ರದೇಶದ ಈ ರಸ್ತೆ ಇದಕ್ಕೆ ಮುಂಚೆ ಹೊಂಡ, ಗುಂಡಿಗಳಿಂದ ಕೂಡಿತ್ತು. ಈಗ ಪ್ಲಾಸ್ಟೋನ್ ತಂತ್ರಜ್ಞಾನದ ರಸ್ತೆಗಳಲ್ಲಿ ಸರಾಗವಾಗಿ ವಾಹನಗಳು ಚಲಿಸುತ್ತಿವೆ. ಚಾಲಕರು ಮನೆಗೆ ಕ್ಷೇಮವಾಗಿ ತಲುಪುತ್ತಿದ್ದಾರೆ.