ತಮ್ಮ ವಿರುದ್ಧ ದಾಖಲಾಗಿದ್ದ ಎರಡನೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ರಾಘವೇಶ್ವರ ಶ್ರೀಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ನಗರದ ಸೆಷನ್ಸ್ ನ್ಯಾಯಾಲಯವು ಇಂದು ನಡೆಸಿದ್ದು. 30 ದಿನಗಳ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯದ ಏಕ ಸದಸ್ಯ ಪೀಠ, ಇದು ಹಳೆಯ ಪ್ರಕರಣವಾಗಿದ್ದು, ಜಾಮೀನು ನೀಡಬಹುದಾಗಿದೆ ಎಂದು ತೀರ್ಮಾನಿಸಿ ಜಾಮೀನು ಮಂಜೂರು ಮಾಡಿದೆ. ಈ ವೇಳೆ ಸರ್ಕಾರಿ ಪರ ವಾದ ಮಂಡಿಸಿದ ಎಸ್ಪಿಪಿ ಪೊನ್ನಣ್ಣ, ಈ ಹಿಂದಿನ ಪ್ರಕರಣದಲ್ಲಿ ನೀಡಲಾಗಿರುವ ಜಾಮೀನಿನಲ್ಲಿ ಶ್ರೀಗಳು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಬಾರದೆಂದು ವಾದ ಮಂಡಿಸಿದರು.
ಷರತ್ತಿನಲ್ಲಿ ತನಿಖೆಗೆ ಸಹಕರಿಸಬೇಕು, ಪ್ರತೀ ಭಾನುವಾರ ಪೊಲೀಸ್ ಠಾಣೆಗೆ ಆಗಮಿಸಿ ಸಹಿ ಹಾಕಬೇಕು, ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಸೂಚಿಸಲಾಗಿದೆ.
ಇನ್ನು ಶ್ರೀಗಳ ವಿರುದ್ಧ ಯಕ್ಷಗಾನ ಕಲಾವಿದೆಯೋರ್ವರು ಶ್ರೀಗಳು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ನಗರದ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳು ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದರು.