ಭೋಪಾಲದಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದ ವಿಶಾಲ್ ಯಾದವ್ ಎಂಬ ವಿದ್ಯಾರ್ಥಿ ತಾನು ವಾಸಿಸುತ್ತಿದ್ದ ಕಟ್ಟದ 6ನೇ ಅಂತಸ್ತಿನಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ. ಆತ ಕೆಳಕ್ಕೆ ಬಿದ್ದ ಕೂಡಲೇ ನೆರೆಹೊರೆಯವರು ಆತನನ್ನು ಆಸ್ಪತ್ರೆಗೆ ಕೊಂಡೊಯ್ದರು. ಆದರೆ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದರು. ಆತ್ಮಹತ್ಯೆಗೂ ಮೊದಲು ಆತ ತನ್ನ ಗೆಳೆಯನಿಗೆ ಸಂದೇಶ ಕಳುಹಿಸಿದ್ದ. ಅದೇನು ಗೊತ್ತೆ 'ಹಾದಿಯಲ್ಲಿ ಹಾಡು ಕೇಳುತ್ತ ಹೋಗಲು ನಾನು ನನ್ನ ಜತೆ ಮೊಬೈಲ್ ಕೊಂಡೊಯ್ಯುತ್ತಿದ್ದೇನೆ'. ಮತ್ತೆ ಆತನೊಂದು ಮನವಿಯನ್ನು ಮಾಡಿಕೊಂಡಿದ್ದ . ಅದೇನೆಂದರೆ ಗೆಳೆಯ 'ನನ್ನ ನನ್ನ ಫೇಸ್ಬುಕ್ ಅಪಡೇಟ್ ಮಾಡು... ಪ್ಲೀಸ್....'
ಮೂಲತಃ ಹರಿಯಾಣಾದವನಾದ ವಿಶಾಲ್, ಸಾವಿಗೂ ಮುನ್ನ ತನಗೆ ಕಳುಹಿಸಿರುವ ಎಮ್ಎಮ್ಎಸ್ ಬಗ್ಗೆ ಆತನ ಗೆಳೆಯ ಜಿತಿನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಸಾವಿಗೆ ಮುನ್ನ ಹದಿಹರೆಯದ ಆ ಹುಡುಗ ಕಳುಹಿಸಿದ ಸಂದೇಶ ಹಲವು ಭಾವನೆಗಳ ಸಮಾಗಮ. ಇದನ್ನು ಓದಿ ಅಳುತ್ತಿರೋ, ನಗುತ್ತಿರೋ... ಹುಚ್ಚೆನ್ನುತ್ತಿರೋ ನಿಮಗೆ ಬಿಟ್ಟಿದ್ದು ... ಸಂದೇಶದಲ್ಲಿ ಹೀಗೆ ಬರೆದಿತ್ತು....
ನಾನು ಹೋಗುತ್ತಿದ್ದೇನೆ...ಫೇಸ್ಬುಕ್ಲ್ಲಿ ಸ್ಟೇಟಸ್ ಅಪಡೇಟ್ ಮಾಡು...
"ಸಹೋದರ, ನಾನು ಹೋಗುತ್ತಿದ್ದೇನೆ ಎಂದು ನನ್ನ ಪರವಾಗಿ ಫೇಸ್ಬುಕ್ಲ್ಲಿ ಸ್ಟೇಟಸ್ ಅಪಡೇಟ್ ಮಾಡು. ನನ್ನ ಆನ್ಲೈನ್ ಸ್ನೇಹಿತರೆಲ್ಲರಿಗೂ ನಾನವರನ್ನು ನೆನಪು ಮಾಡಿಕೊಳ್ಳುತ್ತೇನೆ ಎಂದು ತಿಳಿಸು. ಯಾರಿಗೆ ಏನು ಹೇಳಬೇಕು ಎಂದು ನಿನಗೆ ಚೆನ್ನಾಗಿ ತಿಳಿದಿದೆ. ಗೆಳೆಯ ನೀನು ಮರೆಯದೇ ನನ್ನ ಎಲ್ಲ ಸ್ನೇಹಿತರಿಗೂ ನನ್ನ ಬಾಯ್( ವಿದಾಯ) ಹೇಳು".
ಸಾಯಲು ಭಯವಾಗುತ್ತಿದೆ...
"ನನಗೆ ಸಾಯಲು ಭಯವಾಗುತ್ತಿದೆ. ಆದರೆ ನನಗೆ ಬದುಕುವ ಇಷ್ಟ ಇಲ್ಲ. ಈಗಷ್ಟೇ ಅಮ್ಮ ಮತ್ತು ಅಣ್ಣ ಫೋನ್ ಮಾಡಿದ್ದರು. ಅಮ್ಮ ಪದೇ ಪದೇ ಔಷಧಿಯನ್ನು ತೆಗೆದುಕೋ ಎನ್ನುತ್ತಿದ್ದಳು. ಆದರೆ ಅವಳಿಗೆ ತಿಳಿದಿಲ್ಲ. ನಾನು ಶಾಶ್ವತ ಔಷಧಿ ತೆಗೆದುಕೊಳ್ಳ ಹೊರಟಿದ್ದೇನೆ ಎಂದು. ಇದು ಅವರ ಜತೆ ನಾನಾಡಿದ ಕೊನೆಯ ಮಾತುಗಳು. ನಾನು ನನ್ನಪ್ಪ, ಅಮ್ಮ ಮತ್ತು ಅಣ್ಣನಿಗೆ ನಾನವರನ್ನು ಪ್ರೀತಿಸುತ್ತೇನೆ ಎಂದು ಒಮ್ಮೆಯೂ ಹೇಳಿಲ್ಲ. ನಾನು ಹೋದ ಮೇಲೆ ಅವರಿಗೆ ದಯವಿಟ್ಟು ಇದನ್ನು ಹೇಳು... ನಾನವರನ್ನು ತುಂಬಾ ತುಂಬಾ ಪ್ರೀತಿಸುತ್ತೇನೆ".
ಮೊಬೈಲ್ ತೆಗೆದುಕೊಂಡು ಹೋಗುತ್ತಿದ್ದೇನೆ...ದಾರಿಯಲ್ಲಿ ಹಾಡು ಕೇಳುತ್ತೇನೆ...
"ನಾನು ನನ್ನ ಮೊಬೈಲ್ ಜತೆಗಿಟ್ಟುಕೊಂಡು ಹೋಗುತ್ತಿದ್ದೇನೆ. ದಾರಿಯಲ್ಲಿ ಹಾಡು ಕೇಳುತ್ತ ಹೋಗಬಹುದಲ್ಲವೇ? ಸಹೋದರ ನನಗೆ ಪೇಪರ್ ಕೊಡಲು ಬಹಳ ಭಯವಾಗುತ್ತಿದೆ. ಆದರೆ ನೀನು ಬೆದರಬೇಡಾ. ನಿನ್ನ ಪೇಪರ್ನ್ನು ಬಹಳ ಚೆನ್ನಾಗಿ ನೀಡು. ಕೆಲವು ಕ್ಷಣಗಳ ನಂತರ ನನ್ನ ಜೀವನದ ಎಲ್ಲ ಪ್ರಶ್ನೆಗಳಿಗೆ ನನ್ನ ಬಳಿಯೇ ಉತ್ತರ ಸಿಗಲಿದೆ...."